ಕರ್ಣಾಟಕ ಬ್ಯಾಂಕಿನ ನಕಲಿ ಶಾಖೆ ಪತ್ತೆ!
ಬಲಿಯಾ(ಉ.ಪ್ರ),ಮಾ.29: ಇಲ್ಲಿಯ ಮುಲಾಯಂ ನಗರ ಪ್ರದೇಶದಲ್ಲಿ ಖಾಸಗಿ ಕ್ಷೇತ್ರದ ಪ್ರಮುಖ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕಿನ ನಕಲಿ ಶಾಖೆಯನ್ನು ನಡೆಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ಣಾಟಕ ಬ್ಯಾಂಕಿನ ನಕಲಿ ಶಾಖೆಯು ಕಾರ್ಯಾಚರಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಾರಣಾಸಿ ಮತ್ತು ದಿಲ್ಲಿಯಿಂದ ಬ್ಯಾಂಕಿನ ಅಧಿಕಾರಿಗಳು ಬುಧವಾರ ಇಲ್ಲಿಗೆ ಆಗಮಿಸಿದ್ದು, ಅವರ ದೂರಿನ ಆಧಾರದಲ್ಲಿ ಆರೋಪಿ, ಬದಾಯು ಜಿಲ್ಲೆಯ ನಿವಾಸಿ ಅಫಾಕ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ನಕಲಿ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ಈತ ತನ್ನ ಹೆಸರು ವಿನೋದಕುಮಾರ ಕಾಂಬಳಿ ಮತ್ತು ತಾನು ಮುಂಬೈ ನಿವಾಸಿಯೆಂದು ಹೇಳಿಕೊಂಡಿದ್ದ ಎಂದು ಪೊಲೀಸ್ ಅಧೀಕ್ಷಕ ಎಸ್.ಪಿ.ಗಂಗೂಲಿ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಹಕರಿಂದ ಸಂಗ್ರಹಿಸಿದ್ದ 1.37 ಲ.ರೂ.ಗೂ ಅಧಿಕ ನಗದು ಹಣ, ಮೂರು ಕಂಪ್ಯೂಟರ್ಗಳು, ಒಂದು ಲ್ಯಾಪ್ಟಾಪ್, ಎರಡು ಮೊಬೈಲ್ ಫೋನ್ಗಳು, ಒಂದು ಪ್ರಿಂಟರ್, ಕೆಲವು ಬ್ಯಾಂಕ್ ಪಾಸ್ಬುಕ್ಗಳು, ಪೇ-ಇನ್ ಮತ್ತು ಡೆಪಾಸಿಟ್ ಸ್ಲಿಪ್ಗಳು ಮತ್ತು ಇತರ ಸಾಮಗ್ರಿಗಳನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲ್ಲಿಯ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.