ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಬೇಡ: ಸರಕಾರದ ಸೂಚನೆ
ಹೊಸದಿಲ್ಲಿ, ಮಾ.29: ಹಾಲಿ (2018-19ರ) ಆರ್ಥಿಕ ವರ್ಷದಲ್ಲಿ ವಿವಿಧ ಯೋಜನೆಗಳಿಗೆ ಅನುದಾನವು ವರ್ಷಾರಂಭದ ಮೊದಲ ದಿನದಿಂದಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದ್ದು , ಮುಂಗಾರು ಅಧಿವೇಶನದ ಆರಂಭಕ್ಕೂ ಮೊದಲೇ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆಯ ಕಾಮಗಾರಿ ನಡೆಸಬೇಕು ಎಂದು ಸರಕಾರವು ಸಚಿವಾಲಯಗಳಿಗೆ ಸೂಚನೆ ನೀಡಿದೆ.
ಎಪ್ರಿಲ್ 1ರಿಂದಲೇ ಯೋಜನೆಗಳ ಕಾಮಗಾರಿ ಆರಂಭಿಸಲು ವಿವಿಧ ಸಚಿವಾಲಯಗಳಿಗೆ ಹಣ ದೊರಕಿಸುವ ಪ್ರಮುಖ ಉದ್ದೇಶದಿಂದ ಬಜೆಟ್ ಮಂಡನೆಯನ್ನು ಮುಂದೂಡಲಾಗಿದೆ ಎಂದು ವಿತ್ತ ಸಚಿವಾಲಯವು ಎಲ್ಲಾ ಸಚಿವಾಲಯ ಹಾಗೂ ವಿಭಾಗಗಳಿಗೆ ಸ್ಪಷ್ಟಪಡಿಸಿದೆ. ಇದೀಗ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಅನುದಾನ ಲಭ್ಯವಾಗಿದೆ. ಆದ್ದರಿಂದ ಸಚಿವಾಲಯದ ಯೋಜನೆಗಳು ಆರ್ಥಿಕ ವರ್ಷದ ಆರಂಭದಿಂದಲೇ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
ಪ್ರಥಮ ಹಾಗೂ ದ್ವಿತೀಯ ತ್ರೈಮಾಸಿಕ ಅವಧಿಗಳಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನಕ್ಕೆ ವಿತ್ತ ಇಲಾಖೆಯ ಸ್ಥಾಯಿ ಸಮಿತಿ, ವೆಚ್ಚ ಮತ್ತು ಆರ್ಥಿಕ ಸಮಿತಿ ಹಾಗೂ ಸಂಪುಟದ ಅನುಮೋದನೆ ಪಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ವಿತ್ತ ಸಚಿವಾಲಯ ತಿಳಿಸಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಫೆ.1ರಂದು 2018-19ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.