ಸಿಬಿಎಸ್ಇ ಪರೀಕ್ಷೆ ಬಹಿಷ್ಕರಿಸಿ: ವಿದ್ಯಾರ್ಥಿಗಳಿಗೆ ರಾಜ್ ಠಾಕ್ರೆ ಆಗ್ರಹ
ಮುಂಬೈ, ಮಾ. 30: ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಸರಕಾರ ಪ್ರಸ್ತಾಪಿಸುವ ಮರು ಪರೀಕ್ಷೆ ಬಹಿಷ್ಕರಿಸುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಆಗ್ರಹಿಸಿದ್ದಾರೆ.
ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಇರಿಸುವುದು ಸರಕಾರದ ಜವಾಬ್ದಾರಿ. ಆದರೆ, ತನ್ನ ತಪ್ಪನ್ನು ಸರಿಪಡಿಸಿಕೊಳ್ಳದ ಸರಕಾರ ಮರು ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಹೊರೆ ಹೊರಿಸುತ್ತದೆ ಎಂದಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಇರಿಸಲು ಸರಕಾರ ಅಸಮರ್ಥವಾಗಿದೆ. ಇದರಿಂದ ಈಗ ವಿದ್ಯಾರ್ಥಿಗಳು ಮರು ಪರೀಕ್ಷೆಯ ಭಾರ ಹೊರಬೇಕು. ತಪ್ಪಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ಯಾಕೆ ಸಂಕಷ್ಟಕ್ಕೆ ಸಿಲುಕಿಸಬೇಕು ಎಂದು ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. ‘‘ನಾನು ಮಹಾರಾಷ್ಟ್ರ ಹಾಗೂ ದೇಶದ ಇತರ ಭಾಗಗಳ ಎಲ್ಲ ಸಿಬಿಎಸ್ಇ ವಿದ್ಯಾರ್ಥಿಗಳ ಪೋಷಕರಲ್ಲಿ ಮನವಿ ಮಾಡುತ್ತೇನೆ. ಯಾವುದೇ ಸಂದರ್ಭದಲ್ಲಿ ಕೂಡ ನಿಮ್ಮ ಮಕ್ಕಳು ಮರು ಪರೀಕ್ಷೆಗೆ ಹಾಜರಾಗುವುದಕ್ಕೆ ಅನುಮತಿ ನೀಡಬೇಡಿ. ಈಗ ನೀವು ತಲೆಬಾಗಿದರೆ ಹಾಗೂ ಹೊಂದಾಣಿಕೆ ಮಾಡಿಕೊಂಡರೆ, ಭವಿಷ್ಯದಲ್ಲಿ ಇನ್ನಷ್ಟು ತಲೆಬಾಗಬೇಕಾಗುತ್ತದೆ’’ ಎಂದು ಠಾಕ್ರೆ ಹೇಳಿದ್ದಾರೆ.