ಬಿಜೆಪಿಯ ಹಿಂದುತ್ವ ಭಾರತದಲ್ಲಿ ನಡೆಯದು: ನಟ ಪ್ರಕಾಶ್ ರಾಜ್
ಬೆಂಗಳೂರು, ಮಾ.31: ಭಾರತೀಯ ಜನತಾ ಪಕ್ಷವು ಹರಡುತ್ತಿರುವ ಹಿಂದುತ್ವವು ಭಾರತದಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಶನಿವಾರದಂದು ಬೆಂಗಳೂರಿನಲ್ಲಿ ಇಂಡಿಯಾ ಟುಡೆ ಗ್ರೂಪ್ ನಡೆಸಿದ ಕರ್ನಾಟಕ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ.
ಸಂಸ್ಕೃತಿ ಕದನ ವಿಭಾಗದಡಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಪ್ರಕಾಶ್ ರಾಜ್ ಬಳಿ ಕನ್ನಡಿಗರ ಸಂಸ್ಕೃತಿ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, ಇಲ್ಲಿ ಎಲ್ಲರೂ ಬದುಕಬಹುದು ಎಂಬ ಭಾವನೆಯನ್ನು ನಾವು ಹರಡುವ ಅಗತ್ಯವಿದೆ. ಎಲ್ಲರೂ ಸೌಹಾರ್ದಯುತವಾಗಿ ಬದುಕಬಹುದು ಎಂಬುದನ್ನು ತೋರಿಸಬೇಕಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ಬಹುಸಂಸ್ಕೃತಿ ಮತ್ತು ಸೌಹಾರ್ದತೆಯ ನಾಡು. ಬಿಜೆಪಿ ಹರಡುತ್ತಿರುವ ಹಿಂದುತ್ವವು ಭಾರತದಲ್ಲಿ ಸಫಲವಾಗಲು ಸಾಧ್ಯವಿಲ್ಲ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ. ಕರ್ನಾಟಕದ ಜನರು ಬಿಜೆಪಿಯ ಹಿಂದುತ್ವವನ್ನು ಒಪ್ಪುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ, ರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ನಿಮಗೆ ಇದರ ಉತ್ತರ ಸಿಗಲಿದೆ ಎಂದು ರಾಜ್ ಉತ್ತರಿಸಿದ್ದಾರೆ. ನಮ್ಮದು ಸಹಿಷ್ಣು ರಾಜ್ಯ. ಯಾವುದೇ ಧರ್ಮ ಅಥವಾ ಯಾವುದೇ ಹಿಂದುತ್ವ ಇತರ ಧರ್ಮದ ಬಗ್ಗೆ ಸಹಿಷ್ಣುತೆ ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು ಪ್ರಕಾಶ್ ರಾಜ್ ಅಭಿಪ್ರಾಯಿಸಿದ್ದಾರೆ.