ಉತ್ತರ ಪ್ರದೇಶ: ಮತ್ತೊಂದು ಅಂಬೇಡ್ಕರ್ ಪ್ರತಿಮೆಗೆ ಹಾನಿ
ಸಾಂದರ್ಭಿಕ ಚಿತ್ರ
ಬಲ್ಲಿಯಾ, ಎ. 7: ಬಲ್ಲಿಯಾ ಜಿಲ್ಲೆಯ ನಾಗ್ರಾ ಪ್ರದೇಶದ ಥೇಡ್ವಾರಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಶನಿವಾರ ಹಾನಿ ಎಸಗಿದ್ದಾರೆ.
ಅಂಬೇಡ್ಕರ್ ಪ್ರತಿಮೆಯ ಬಲ ಕೈ, ಕಾಲು ಹಾಗೂ ತಲೆಗೆ ಇಂದು ಬೆಳಗ್ಗೆ ಹಾನಿ ಎಸಗಲಾಗಿದೆ ಎಂದು ನಾಗ್ರಾ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ದಿನೇಶ್ ತಿವಾರಿ ಹೇಳಿದ್ದಾರೆ.
ಉಪ ಪೊಲೀಸ್ ಅಧೀಕ್ಷಕ ಅವಧೇಶ್ ಚೌಧರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ಘಟನೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜರನ್ನು ಸಮಾಧಾನಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಉತ್ತರಪ್ರದೇಶದ ಫಿರೋಜಾಬಾದ್, ಏತಾಹ್, ಸಿದ್ದಾರ್ಥನಗರ್ ಹಾಗೂ ಅಲಹಾಬಾದ್ ಜಿಲ್ಲೆಯಲ್ಲಿ ಇದೇ ರೀತಿ ಪ್ರತಿಮೆ ಧ್ವಂಸ ಘಟನೆಗಳು ಸಂಭವಿಸಿವೆ. ಈ ಘಟನೆಗಳ ಹಿನ್ನೆಲೆಯಲ್ಲಿ ತಮ್ಮ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆಗಳಿಗೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.