ಚಂದ ಕೊಚ್ಚಾರ್, ದೀಪಕ್ ಕೊಚ್ಚಾರ್, ವೀಡಿಯೊಕಾನ್ ದೂತ್ಗೆ ಲುಕೌಟ್ ನೋಟಿಸ್
ಮುಂಬೈ, ಎ. 6: 2012ರಲ್ಲಿ ವಿಡಿಯೋಕಾನ್ ಗುಂಪಿಗೆ ಸಾಲ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿ ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ಗುಂಪಿನ ಪ್ರವರ್ತಕ ವೇಣುಗೋಪಾಲ್ ದೂತ್ ವಿರುದ್ಧ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಸಿಬಿಐ ತನ್ನ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವ ಮುನ್ನ ದೇಶ ತ್ಯಜಿಸದಂತೆ ದೀಪಕ್ ಕೊಚ್ಚಾರ್ ಹಾಗೂ ದೂತ್ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಗುರುವಾರ ಆಗ್ನೇಯ ಏಶ್ಯಾ ದೇಶಕ್ಕೆ ತೆರಳುತ್ತಿದ್ದ ರಾಜೀವ್ ಕೊಚ್ಚಾರ್ (ಚಂದ ಕೊಚ್ಚಾರ್ ಅವರ ಸಹೋದರ) ನನ್ನು ಮುಂಬೈ ವಿಮಾನ ನಿಲ್ದಾಣದಿಂದ ವಲಸೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಬ್ಯಾಂಕ್ ಹಾಗೂ ವಿಡಿಯೊಕಾನ್ ಗುಂಪಿನ ನಡುವಿನ ವ್ಯವಹಾರಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸಿಬಿಐಗೆ ಅವರನ್ನು ಹಸ್ತಾಂತರಿಸಲಾಗಿತ್ತು.
ಸಿಬಿಐ ಲುಕೌಟ್ ನೊಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ರಾಜೀವ್ ಕೊಚ್ಚಾರ್ ಮುಂಬೈ ವಿಮಾನ ನಿಲ್ದಾಣದ ಮೂಲಕ ದೇಶ ತ್ಯಜಿಸುವುದನ್ನು ಅಧಿಕಾರಿಗಳು ತಡೆದಿದ್ದರು. ಈ ನಡುವೆ ಸಿಬಿಐ ವಶಕ್ಕೆ ತೆಗೆದುಕೊಂಡ ಎರಡನೇ ದಿನವಾಗ ಶುಕ್ರವಾರ ರಾಜೀವ್ ಕೊಚ್ಚಾರ್ರ ವಿಚಾರಣೆ ನಡೆಸಿದೆ. ಚಂದಾ ಕೊಚ್ಚಾರ್ ಅವರ ಸಹೋದರ ಆಗಿರುವ ರಾಜೀವ್ ಕೊಚ್ಚಾರ್ ಅವರು ಸ್ಥಾಪಿಸಿದ ಅವಿಸ್ಟಾ ಅಡ್ವೈಸರಿ ಸಂಸ್ಥೆ ಬಗ್ಗೆ ರಾಜೀವ್ ಕೊಚ್ಚಾರ್ ಅವರನ್ನು ಸಿಬಿಐ ವಿಚಾರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.