ಭಾರತದಿಂದ ಬಿಹಾರದ ರಕ್ಸೌಲ್ ಮತ್ತು ಕಠ್ಮಂಡು ನಡುವೆ ವ್ಯೂಹಾತ್ಮಕ ರೈಲು ಮಾರ್ಗ ನಿರ್ಮಾಣ
ಹೊಸದಿಲ್ಲಿ,ಎ.7: ಉಭಯ ರಾಷ್ಟ್ರಗಳ ನಡುವಿನ ಜನಸಂಪರ್ಕವನ್ನು ಹೆಚ್ಚಿಸಲು ಮತ್ತು ಸರಕು ಸಾಗಾಣಿಕೆ ಸೌಲಭ್ಯ ಕಲ್ಪಿಸಲು ಬಿಹಾರದ ರಕ್ಸೌಲ್ ಮತ್ತು ನೇಪಾಳದ ಕಠ್ಮಂಡು ನಡುವೆ ವ್ಯೂಹಾತ್ಮಕ ರೈಲುಮಾರ್ಗವೊಂದನ್ನು ಭಾರತವು ನಿರ್ಮಿಸಲಿದೆ.
ಶನಿವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉಭಯ ರಾಷ್ಟ್ರಗಳ ನಡುವಿನ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ನೂತನ ರೈಲುಮಾರ್ಗ ನಿರ್ಮಾಣದ ಕುರಿತು ಪ್ರಕಟಿಸಲಾಯಿತು.
ನೂತನ ವಿದ್ಯುತ್ ಚಾಲಿತ ರೈಲುಮಾರ್ಗಕ್ಕೆ ಭಾರತವು ಹಣಕಾಸು ಒದಗಿಸಲಿದೆ. ಉಭಯ ರಾಷ್ಟ್ರಗಳ ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಭಾರತ-ನೇಪಾಳ ರೈಲು ಸಂಪರ್ಕ ಯೋಜನೆಗಳ ಹಂತ-1ರ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಉಭಯ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲಿ ಕಾಮಗಾರಿ ಪ್ರಗತಿಯಲ್ಲಿರುವ ರೈಲುಮಾರ್ಗಗಳಿಗಾಗಿ ಭೂ ಲಭ್ಯತೆ ಸೇರಿದಂತೆ ಬಾಕಿಯುಳಿದಿರುವ ಎಲ್ಲ ವಿವಾದಗಳನ್ನು ತ್ವರಿತವಾಗಿ ಬಗೆಹರಿಸುವಲ್ಲಿ ನೇಪಾಳದ ಬದ್ಧತೆಯನ್ನೂ ಭಾರತವು ಪ್ರಶಂಸಿಸಿತು.
ಭಾರತದ ಮೇಲೆ ನೇಪಾಳದ ಅವಲಂಬನೆಯನ್ನು ತಗ್ಗಿಸುವ ಉದ್ದೇಶದಿಂದ ಟಿಬೆಟ್ ಮೂಲಕ ಆ ರಾಷ್ಟ್ರದೊಂದಿಗೆ ವ್ಯೆಹಾತ್ಮಕ ರೈಲುಮಾರ್ಗವನ್ನು ನಿರ್ಮಿಸಲು ಚೀನಾ ಎರಡು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಕ್ಸೌಲ್-ಕಠ್ಮಂಡು ನಡುವೆ ರೈಲು ಸಂಪರ್ಕದ ಪ್ರಸ್ತಾವವು ಮಹತ್ವ ಪಡೆದುಕೊಂಡಿದೆ.
ಚೀನಾ ಇತ್ತಿಚಿಗೆ ನೇಪಾಳದ ಜೊತೆ ಸಂಬಂಧವನ್ನು ಹೆಚ್ಚಿಸಿಕೊಂಡಿದ್ದು, ಅಲ್ಲಿ ಮೂರು ಹೆದ್ದಾರಿಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಅವು 2020ರ ವೇಳೆಗೆ ಪೂರ್ಣಗೊಳ್ಳಲಿವೆ. ಉಭಯ ರಾಷ್ಟ್ರಗಳು ಇತ್ತೀಚಿಗೆ ರಹದಾರಿ ಒಪ್ಪಂದವೊಂದಕ್ಕೂ ಸಹಿಹಾಕಿವೆ. ಈ ಸಂದರ್ಭದಲ್ಲಿಯೇ ಭಾರತ-ನೇಪಾಳಗಳು ಹೊಸ ರೈಲುಮಾರ್ಗ ನಿರ್ಮಾಣ ಒಪ್ಪಂದವನ್ನು ಮಾಡಿಕೊಂಡಿವೆ.