ಕಾವೇರಿ ನೀರು ಹಂಚಿಕೆ:ಕರಡು ಯೋಜನೆ ತಯಾರಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ, ಎ. 9: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ನೀಡಲಾಗಿರುವ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆಕರಡು ಯೋಜನೆ ತಯಾರಿಸಲು ವಿಫಲವಾಗಿರುವ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ, ತಮಿಳುನಾಡು , ಕೇರಳ ಮತ್ತು ಪುದುಚೇರಿಗೆ ನೀರು ಹಂಚಿಕೆಗೆ ಸಂಬಂಧಿಸಿ ಆರು ವಾರಗಳೊಳಗೆ ಕರಡು ಯೋಜನೆ ಸಿದ್ಧಪಡಿಸುವಂತೆ ಆದೇಶಿಸಿದ್ದರೂ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಪ್ರೀಂ ಕೋರ್ಟ್ 'ನೀವು ಯೋಜನೆಯನ್ನು ಸಿದ್ಧಪಡಿಸಬೇಕು. ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ' ಎಂದು ಎಚ್ಚರಿಕೆ ನೀಡಿದೆ.
ಕಾವೇರಿ ಜಲ ನಿರ್ವಹಣಾ ಮಂಡಳಿ ಮತ್ತು ಮೇಲ್ವಿಚಾರಣಾ ಪ್ರಾಧಿಕಾರ ರಚನೆಯೂ ಸೇರಿದಂತೆ ಪ್ರತಿ ತಿಂಗಳು ಕರ್ನಾಟಕ, ತಮಿಳುನಾಡು , ಕೇರಳ ಮತ್ತು ಪುದುಚೇರಿಗೆ ಬಿಡುಗಡೆ ಮಾಡಬೇಕಾದ ಕಾವೇರಿ ನೀರಿನ ಪಾಲನ್ನು ನಿಗದಿಪಡಿಸಿ ಕರಡು ಯೋಜನೆ ತಯಾರಿಸುವಂತೆ ಇದೇ ಸಂರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮೇ 3ರೊಳಗೆ ಕರಡು ಯೋಜನೆ ತಯಾರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚನೆ ನೀಡಿತು. ಆದರೆ ಕರ್ನಾಟಕ ವಿಧಾನಸಭೆಗೆ ಮೇ 12 ಚುನಾವಣೆ ನಡೆಯಲಿರುವುದರಿಂದ , ಚುನಾವಣೆ ಮುಗಿದ ಬಳಿಕ ಕರಡು ಯೋಜನೆ ಸಿದ್ಧಪಡಿಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.