ಆಸಿಫಾ ಸಾವನ್ನು ಸಂಭ್ರಮಿಸಿ ವಿಕೃತಿ ಮೆರೆದವನ ವಿರುದ್ಧ ಪ್ರಕರಣ ದಾಖಲು
ಕೊಚ್ಚಿ, ಎ.15: ದೇಶವನ್ನೇ ತಲ್ಲಣಗೊಳಿಸಿದ್ದ ಕಥುವಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಕೀಳುಮಟ್ಟದ ಪೋಸ್ಟ್ ಮಾಡಿ ವಿಕೃತಿ ಮೆರೆದ ಕೇರಳದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಎರ್ಣಾಕುಲಂ ನಿವಾಸಿ ವಿಷ್ಣು ನಂದಕುಮಾರ್ ಎಂಬಾತ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಕಥುವಾ ಪ್ರಕರಣಕ್ಕೆ ಸಂಬಂಧಿಸಿ, “ಈ ಸಣ್ಣ ವಯಸ್ಸಿನಲ್ಲೇ ಆಕೆ ಸತ್ತದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಆಕೆ ದೊಡ್ಡವಳಾಗಿ ಭಾರತದ ವಿರುದ್ಧ ಆತ್ಮಾಹುತಿ ಬಾಂಬರ್ ಆಗಿ ಬರಬಹುದಿತ್ತು” ಎಂದು ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಆತ ತನ್ನ ಫೇಸ್ಬುಕ್ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದ. ಇದಕ್ಕೂ ಮೊದಲೇ ಕೋಟಕ್ ಮಹೀಂದ್ರಾ ಬ್ಯಾಂಕ್ ಆತನನ್ನು ಉದ್ಯೋಗದಿಂದ ಕಿತ್ತೆಸೆದಿತ್ತು. ನಾಲ್ಕು ದೂರುಗಳ ನಂತರ ಪಾಣಂಗಾಡ್ ಪೊಲೀಸರು ವಿಷ್ಣು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ,ಎನ್.ರಾಧಾಕೃಷ್ಣನ್ ರ ಸಂಬಂಧಿಯಾಗಿರುವ ವಿಷ್ಣುವಿನ ತಂದೆ ನಂದಕುಮಾರ್ ಸ್ಥಳೀಯ ಆರೆಸ್ಸೆಸ್ ನಾಯಕ ಎನ್ನಲಾಗಿದೆ, ದುಷ್ಕರ್ಮಿ ವಿಷ್ಣುವಿಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.