ನೈಟ್ ಕ್ಲಬ್ ಉದ್ಘಾಟಿಸಿ ಪೇಚಿಗೀಡಾದ ಸಂಸದ ಸಾಕ್ಷಿ ಮಹಾರಾಜ್
ಬಿಜೆಪಿಗೆ ತೀವ್ರ ಮುಜುಗರ
ಲಕ್ನೋ, ಎ.16: ಉನ್ನಾಂವ್ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನಗರದ ಆಲಿಗಂಜ್ ಪ್ರದೇಶದಲ್ಲಿ ನೈಟ್ ಕ್ಲಬ್ ಒಂದನ್ನು ಉದ್ಘಾಟಿಸಿ ವಿವಾದ ಮೈಗೆಳೆದುಕೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ತೀವ್ರ ಮುಜುಗರವುಂಟಾಗಿದೆ ಎನ್ನಲಾಗಿದೆ. ತನ್ನನ್ನು ನೈಟ್ ಕ್ಲಬ್ ಉದ್ಘಾಟಿಸುವಂತೆ ಬಲವಂತ ಪಡಿಸಿದ್ದ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ರಜ್ಜನ್ ಸಿಂಗ್ ವಿರುದ್ಧ ಸಾಕ್ಷಿ ಮಹಾರಾಜ್ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ನೈಟ್ ಕ್ಲಬ್ ಉದ್ಘಾಟನೆಗೆಂದೇ ಸಾಕ್ಷಿ ಮಹಾರಾಜ್ ರವಿವಾರ ಸಂಜೆ ಲಕ್ನೋಗೆ ಆಗಮಿಸಿದ್ದರು. "ಇದು ತನ್ನ ಅಳಿಯನ ಒಡೆತನದ ರೆಸ್ಟೋರೆಂಟ್ ಎಂದು ರಜ್ಜನ್ ಸಿಂಗ್ ಅವರು ಹೇಳಿದ್ದರಿಂದ ನಾನು ಒಪ್ಪಿದೆ. ಇದೊಂದು ಬಾರ್ ಮತ್ತು ನೈಟ್ ಕ್ಲಬ್ ಎಂದು ಅದರ ಉದ್ಘಾಟನೆಯ ನಂತರವಷ್ಟೇ ತಿಳಿಯಿತು" ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
"ಬಾರ್ ಗೆ ನೀಡಲಾದ ಲೈಸನ್ಸ್ ಬಗ್ಗೆ ಮಾಹಿತಿ ಕೇಳಿದ್ದೇನೆ. ನಾನು ಕೇವಲ ಸಂಸದ ಮಾತ್ರವಲ್ಲ ಸಾಧು ಕೂಡ ಹೌದು, ಇಂತಹ ವಿಚಾರಗಳಿಂದ ನಾನು ದೂರವಿರಬೇಕಿದೆ'' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಕಳೆದ ವರ್ಷ ಬಿಜೆಪಿ ಶಾಸಕಿ ಹಾಗೂ ಸಚಿವೆ ಸ್ವಾತಿ ಸಿಂಗ್ ಲಕ್ನೊದಲ್ಲಿ ಬಿಯರ್ ಬಾರ್ ಒಂದನ್ನು ಉದ್ಘಾಟಿಸಿ ಇದೇ ರೀತಿ ವಿವಾದಕ್ಕೀಡಾಗಿದ್ದರು.