ಲೋಕಪಾಲ್: ಆಯ್ಕೆ ಸಮಿತಿಗೆ ವಿಶೇಷ ಜೂರಿ ಮುಂದುವರಿದ ಹುದ್ದೆ ತುಂಬುವ ಪ್ರಕ್ರಿಯೆ
ಹೊಸದಿಲ್ಲಿ, ಎ. 17: ಲೋಕಪಾಲರ ನೇಮಕಕ್ಕೆ ಆಯ್ಕೆ ಸಮಿತಿಯ ವಿಶೇಷ ಜೂರಿ ಹುದ್ದೆ ತುಂಬಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸಮಿತಿಗೆ ವಿಶೇಷ ಜೂರಿ ನಿಯೋಜನೆಗೆ ಶಿಫಾರಸು ಮಾಡಲಾಗಿದೆ ಹಾಗೂ ಇದರ ಪ್ರಕ್ರಿಯೆ ನಡೆಯುತ್ತಿದೆ ಎಂದು ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ. ಈ ಹಂತದಲ್ಲಿ ಯಾವುದೇ ಆದೇಶ ಮಂಜೂರು ಮಾಡುವ ಅಗತ್ಯತೆ ಇಲ್ಲ ಎಂದು ಪೀಠ ಹೇಳಿದೆ ಆದರೆ, ಲೋಕಪಾಲ್ ನೇಮಕ ಪ್ರಕ್ರಿಯೆ ಆದಷ್ಟು ಬೇಗ ಮುಗಿಯಲಿದೆ ಎಂದು ನಿರೀಕ್ಷಿಸುತ್ತೇವೆ ಎಂದು ಪೀಠ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಪೀಠ ಮೇ 15ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಸಮಿತಿಗೆ ವಿಶೇಷ ಜೂರಿಯನ್ನಾಗಿ ಹಿರಿಯ ನ್ಯಾಯವಾದಿ ಪಿ.ಪಿ. ರಾವ್ ಅವರನ್ನು ನಿಯೋಜಿಸಲಾಗಿತ್ತು. ಆದರೆ, 2017ರಲ್ಲಿ ಅವರ ನಿಧನದ ಬಳಿಕ ಆ ಹುದ್ದೆ ಖಾಲಿಯಾಗಿತ್ತು. ಸುಪ್ರೀಂ ಕೋರ್ಟ್ 2017 ಏಪ್ರಿಲ್ 27ರಂದು ತೀರ್ಪು ನೀಡಿದ ಹೊರತಾಗಿಯೂ ಲೋಕಪಾಲ್ಗೆ ನೇಮಕ ಮಾಡದ ವಿಚಾರದ ಬಗ್ಗೆ ಸರಕಾರೇತರ ಸಂಸ್ಥೆ ‘ಕಾಮನ್ ಕಾಸ್’ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.