ಕುಟುಂಬ ನ್ಯಾಯಾಲಯದಲ್ಲೇ ಪತಿಯಿಂದ ಪತ್ನಿ ಹತ್ಯೆ
ಸಂಬಲ್ಪುರ, ಎ.24: ಕುಟುಂಬ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಆಕೆಯ ತಾಯಿ ಹಾಗೂ ಸೊಸೆಯಂದಿರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.
ಸಂಬಲ್ಪುರದ ಸಿಂಧೂರ್ಪಂಖ್ ಗ್ರಾಮದ ರಮೇಶ್ ಕುಂಬಾರ್ ಎಂಬಾತ ತನ್ನ ಪತ್ನಿ ಸಂಜಿತಾ ಚೌಧರಿ(18) ಮೇಲೆ ಖಡ್ಗದಿಂದ ಹಲ್ಲೆ ನಡೆಸಿ ಹತ್ಯೆಗೈದ ಆರೋಪಿ. ಅತ್ತೆ ಲಲಿತಾ ಚೌಧರಿ ಹಾಗೂ ಎರಡೂವರೆ ವರ್ಷದ ಸೊಸೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಮಾವ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹವಾದ ಕೆಲವೇ ತಿಂಗಳಲ್ಲಿ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದ ಸಂಜಿತಾ, ಕುಟುಂಬ ನ್ಯಾಯಾಲಯದಲ್ಲಿ ಪತಿಯ ಜತೆ ಸಂಧಾನ ಮಾತುಕತೆಗಾಗಿ ಪೋಷಕರೊಂದಿಗೆ ಬಂದಿದ್ದಳು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಗಂಡನಿಂದ ಕಿರುಕುಳ ಎದುರಿಸಿದ ಆಕೆ ತವರು ಮನೆಗೆ ಬಂದಿದ್ದಳು. ಸಂಜಿತಾರನ್ನು ಬೇರೆ ವ್ಯಕ್ತಿಗೆ ವಿವಾಹ ಮಾಡಿಕೊಡಲಾಗಿತ್ತು. ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ರಮೇಶ್, ಪತ್ನಿಯನ್ನು ವಾಪಸ್ ಕಳುಹಿಸಿಕೊಡುವಂತೆ ಆಗ್ರಹಿಸಿದ್ದ. ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದ ವೇಳೆ ಪತ್ನಿಯ ಕಡೆಯವರ ಮೇಲೆ ಆರೋಪಿ ಪೂರ್ವಯೋಜಿತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂಜಿತಾ ನ್ಯಾಯಾಲಯದ ಒಳಗೆ ಓಡಿದಾಗ, ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಲೆ ಮಾಡಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಾವನ ಮೇಲೂ ಹಲ್ಲೆಗೆ ಮುಂದಾದಾಗ ಸುದಾನ್ ಚೌಧರಿ ತಹಶೀಲ್ದಾರ್ ಕಚೇರಿಯೊಳಗೆ ಓಡಿ ತಪ್ಪಿಸಿಕೊಂಡರು ಎಂದು ಹೇಳಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.