ದಕ್ಷಿಣ ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಪೊಲೀಸ್ ಹುತಾತ್ಮ
ಶ್ರೀನಗರ, ಎ. 23: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ಯೋಧ ಹುತಾತ್ಮರಾಗಿದ್ದಾರೆ. ಆವಂತಿಪುರ ಜಿಲ್ಲೆಯ ತ್ರಾಲ್ನ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಲತೀಫ್ ಗೊಜ್ರಿ ಗಂಭೀರ ಗಾಯಗೊಂಡು ಮೃತಪಟ್ಟರು. ‘‘ದೇಶಕ್ಕಾಗಿ ಬಲಿದಾನ ಮಾಡಿದ ಯೋಧನ ಕುಟುಂಬದ ಜೊತೆಗೆ ನಾವಿದ್ದೇವೆ’’ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಉಗ್ರರು ಇರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಲಾಮ್ ಅರಣ್ಯದಲ್ಲಿ ಭದ್ರತಾ ಪಡೆ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ಯೋಧ ಮೃತಪಟ್ಟರು. ಇನ್ನೋರ್ವ ಯೋಧ ಗಾಯಗೊಂಡರು ಎಂದು ಅವರು ಹೇಳಿದರು. ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲಿ ಕೃಷ್ಣಾ ಘಾಟಿ ವಲಯದ ಗಡಿ ನಿಯಂತ್ರಣ ರೇಖೆಗುಂಟ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ ಒಂದು ದಿನದ ಬಳಿಕ ಈ ಎನ್ಕೌಂಟರ್ ನಡೆದಿದೆ. ಎನ್ಕೌಂಟರ್ ಮುಂದುವರಿದಿದೆ. ನನ್ನ ಸಹೋದ್ಯೋಗಿಗಳಿಗೆ ಶುಭಾಶಯ ಕೋರುತ್ತೇನೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವಾಯಿದ್ ಟ್ವೀಟ್ ಮಾಡಿದ್ದಾರೆ.