ಪಿಐಎಲ್ ಸಲ್ಲಿಕೆಯಲ್ಲಿ ಆರೆಸ್ಸೆಸ್ ಕೈವಾಡ: ಕಾಂಗ್ರೆಸ್ ಆರೋಪ
ನ್ಯಾ.ಲೋಯಾ ಸಾವು ಪ್ರಕರಣ
ಹೊಸದಿಲ್ಲಿ, ಎ. 26: ನ್ಯಾಯಮೂರ್ತಿ ಬಿ.ಎಚ್. ಲೋಯಾ ಸಾವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ. ಇದು ‘ರಾಜಕೀಯ’ ಪ್ರೇರಿತ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ನಿರ್ದಿಷ್ಟ ಉದ್ದೇಶದ ಫಲಶ್ರುತಿಗಾಗಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗುತ್ತದೆ ಎಂಬ ಸರ್ವೋಚ್ಚ ನ್ಯಾಯಾಲಯದ ವಾದವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಆರೆಸ್ಸೆಸ್ ನಾಯಕ ಭಯ್ಯಿಜಿ ಜೋಶಿ ಅವರ ನಿರ್ದೇಶನದಂತೆ ಪಿಐಎಲ್ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಹಾಗೂ ವಿವೇಕ್ ತಂಖಾ ಹೇಳಿದ್ದಾರೆ. ನ್ಯಾಯಮೂರ್ತಿ ಲೋಯಾ ಸಾವಿನ ಸಂದರ್ಭಕ್ಕೆ ಸಂಬಂಧಿಸಿ 2017 ನವೆಂಬರ್ 27ರಂದು ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠಕ್ಕೆ ಸೂರಜ್ ಲೋಲಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಅವರು ಉಲ್ಲೇಖಿಸಿದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಭರವಸೆ ಇರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಯಾ ಕುಟುಂಬಕ್ಕೆ ಹೇಳಿದ್ದಾರೆ ಹಾಗೂ ನ್ಯಾಯಮೂರ್ತಿ ಲೋಯಾ ಮರೆತುಹೋಗಲು ಭಾರತ ಅವಕಾಶ ನೀಡದು ಎಂದಿದ್ದಾರೆ.
ಲೋಯಾ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠರ ಪ್ರಚೋದನೆಯಿಂದ ಸಲ್ಲಿಸಲಾದ ಅರ್ಜಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಾನ ಹಾನಿ ಮಾಡಲು ಸಲ್ಲಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಲೋಲಗೆ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದರು ಎಂದು ಸಿಬಲ್ ಆರೋಪಿಸಿದ್ದಾರೆ ಹಾಗೂ ಲೋಲಗೆ ತನ್ನ ಸಹೋದರ ಆರ್ಟಿಐ ಕಾರ್ಯಕರ್ತ ಸತೀಶೆ ಉಕೆಯೊಂದಿಗೆ ನಡೆಸಿರುವ ಸಂವಹನವದ ದಾಖಲೆ ನೀಡಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವಂತೆ ಲೋಲಾಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸುವಂತೆ ಆರೆಸ್ಸೆಸ್ ನಾಯಕ ಭಯ್ಯಿಜಿ ಜೋಷಿ ಪ್ರಚೋದಿಸಿದ್ದರು ಎಂದು ಅವರು ಹೇಳಿದ್ದಾರೆ.