ನವಜಾತ ಶಿಶುವಿನ ಜನನಾಂಗಕ್ಕೇ ವೈದ್ಯರಿಂದ ಕತ್ತರಿ!
ರಾಂಚಿ, ಎ.27: ನವಜಾತ ಶಿಶು ಹೆಣ್ಣುಮಗು ಎಂದು ಬಿಂಬಿಸುವ ಸಲುವಾಗಿ ಗಂಡುಮಗುವಿನ ಶಿಶ್ನವನ್ನೇ ಕತ್ತರಿಸಿ, ಮಗುವಿನ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಆರೋಗ್ಯ ಕಾರ್ಯದರ್ಶಿ ನಿಧಿ ಖಾರೆ ಸೂಚಿಸಿದ್ದಾರೆ.
ಛಾತ್ರಾ ಜಿಲ್ಲೆಯ ಇತ್ಖೋರಿ ಬ್ಲಾಕ್ನಲ್ಲಿ ಈ ಘಟನೆ ನಡೆದಿದ್ದು, ಮಗು ಖಾಸಗಿ ಕ್ಲಿನಿಕ್ನಲ್ಲಿ ಮೃತಪಟ್ಟಿದೆ. ಎಂಟು ತಿಂಗಳ ಗರ್ಭಿಣಿ ಗುಡಿಯಾದೇವಿ ತಪಾಸಣೆಗೆ ಆಗಮಿಸಿದ್ದಾಗ, ಆಕೆಯಿಂದ ಹೆಚ್ಚು ಹಣ ಕೀಳುವ ಸಲುವಾಗಿ ವೈದ್ಯರು, ಆಲ್ಟ್ರಾಸೌಂಡ್ ಪರೀಕ್ಷೆ ಆಗಬೇಕು ಎಂದು ವೈದ್ಯರು ಸೂಚಿಸಿ, ಹೆರಿಗೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಅಗತ್ಯ ಎಂದು ಹೇಳಿದ್ದಾರೆ. ನಕಲಿ ಪರೀಕ್ಷೆ ನಡೆಸಿ, ಮಗು ಹೆಣ್ಣು ಎಂದು ಹೇಳಿದ್ದಾರೆ. ಆದರೆ ದೇವಿ ಗಂಡುಮಗುವಿಗೆ ಜನ್ಮ ನೀಡಿದಾಗ, ಇಬ್ಬರು ವೈದ್ಯರು ಶಿಶುವಿನ ಶಿಶ್ನ ಕತ್ತರಿಸಿದ್ದಾರೆ. ದೋಷಯುಕ್ತ ಮಗು ಹುಟ್ಟಿ ತಕ್ಷಣ ಸತ್ತಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ವೈದ್ಯರ ಉತ್ತರದಿಂದ ತೃಪ್ತರಾಗದ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ಲಿನಿಕ್ಗೆ ಬರುವ ವೇಳೆ ವೈದ್ಯರು ನಾಪತ್ತೆಯಾಗಿದ್ದರು. ಐಪಿಸಿ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪಿಸಿಪಿಎನ್ಡಿಟಿ ಕಾಯ್ದೆ ಅನ್ವಯವೂ ವೈದ್ಯರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಆರೋಗ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.