ವಿಕಲಾಂಗ ಮಹಿಳೆಯ ಮೇಲೆ ದೇವಸ್ಥಾನದ ಆವರಣದಲ್ಲೇ ಅತ್ಯಾಚಾರ: ಆರೋಪ
ಅರ್ಚಕನ ಬಂಧನ
ರಾಯ್ಪುರ, ಎ.27: ವಿಕಲಾಂಗ ಮಹಿಳೆಯೋರ್ವರ ಮೇಲೆ ದೇವಸ್ಥಾನದ ಆವರಣದಲ್ಲೇ ಅತ್ಯಾಚಾರ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಛತ್ತೀಸ್ ಗಢದ ಧಮಾತರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 28 ವರ್ಷದ ರಾಮ್ ಶಂಕರ್ ವೈಷ್ಣವ್ ಬಂಧಿತ ಎಂದು ಗುರುತಿಸಲಾಗಿದೆ. ಎಪ್ರಿಲ್ 24ರಂದು ಈ ಘಟನೆ ನಡೆದಿತ್ತು.
ವಿಕಲಾಂಗ ಮಹಿಳೆ ಕಂಪ್ಯೂಟರ್ ತರಗತಿಗೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಮಹಿಳೆಯ ತಾಯಿ ದೇವಸ್ಥಾನದೊಳಗೆ ಇದ್ದಾರೆ ಎಂದು ವೈಷ್ಣವ್ ಹೇಳಿದ. ಹಾಗಾಗಿ ದೇವಸ್ಥಾನದೊಳಕ್ಕೆ ಮಹಿಳೆ ತೆರಳಿದ್ದು, ಹಿಂದಿನಿಂದ ಬಂದ ಅರ್ಚಕ ಆಕೆಯನ್ನು ಎಳೆದುಕೊಂಡು ಕೋಣೆಗೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆದರಿಕೆಯಿಂದ ತನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರಿಕೆಯಾದಾಗ ತನ್ನನ್ನು ಅತ್ಯಾಚಾರಗೈದಿದ್ದೇನೆ ಎಂದು ವೈಷ್ಣವ್ ಹೇಳಿದ. ಈ ಬಗ್ಗೆ ಹೊರಗೆ ಬಾಯಿಬಿಟ್ಟರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಹಿಳೆ ತನ್ನ ಹೆತ್ತವರಲ್ಲಿ ತಿಳಿಸಿದ್ದು, ಅವರು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.