ಎಸ್ಸಿ/ಎಸ್ಟಿ ಕಾಯ್ದೆ:ಮೇ 3ಕ್ಕೆ ತೀರ್ಪಿನ ಪುನರ್ಪರಿಶೀಲನೆ ಅರ್ಜಿಗಳ ವಿಚಾರಣೆ
ಹೊಸದಿಲ್ಲಿ,ಎ.27: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ಕುರಿತು ತನ್ನ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಕೇಂದ್ರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮೇ 3ರಂದು ಕೈಗೆತ್ತಿಕೊಳ್ಳಲಿದೆ.
ಶುಕ್ರವಾರ,ಅರ್ಜಿಯ ತ್ವರಿತ ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ದೀಪಕ್ ಗುಪ್ತಾ ಅವರ ಪೀಠವನ್ನು ಕೋರಿಕೊಂಡ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು,ನ್ಯಾಯಾಲಯದ ಸೂಚನೆಯಂತೆ ಈ ವಿಷಯದಲ್ಲಿ ತನ್ನ ಲಿಖಿತ ಹೇಳಿಕೆಯನ್ನು ತಾನು ಈಗಾಗಲೇ ಸಲ್ಲಿಸಿರುವುದಾಗಿ ತಿಳಿಸಿದರು.
ನಾಲ್ಕು ರಾಜ್ಯಗಳೂ ಮರುಪರಿಶೀಲನೆ ಅರ್ಜಿಗಳನ್ನು ಸಲ್ಲಿಸಿವೆ.
ಮುಂದಿನ ವಾರ ಅರ್ಜಿಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾ.ಗೋಯೆಲ್ ಅವರು ವಾದಗಳನ್ನು ಮಂಡಿಸಲು ಮೇ 3ರ ದಿನಾಂಕವನ್ನು ನಿಗದಿಗೊಳಿಸಿದರು.
ಸರ್ವೋಚ್ಚ ನ್ಯಾಯಾಲಯವು ತನ್ನ ಮಾ.20ರ ಆದೇಶದಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯಲ್ಲಿನ ಕೆಲವು ಕಠಿಣ ನಿಯಮಗಳನ್ನು ಸಡಿಲಿಸಿದ್ದು,ಇದು ದೇಶಾದ್ಯಂತ ದಲಿತರ ಪ್ರತಿಭಟನೆಗೆ ಕಾರಣವಾಗಿತ್ತು. ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಕೇಂದ್ರವು ಎ.2ರಂದು ಅರ್ಜಿ ಸಲ್ಲಿಸಿತ್ತು.