ಕಥುವಾ ಪ್ರಕರಣದ ವಿಚಾರಣೆಗೆ ಮೇ 7ರವರೆಗೆ ಸುಪ್ರೀಂ ತಡೆ
ಹೊಸದಿಲ್ಲಿ, ಎ. 27: ಜಮ್ಮು ಹಾಗೂ ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ ಹಾಗೂ ಪ್ರಕರಣವನ್ನು ಚಂಡಿಗಢಕ್ಕೆ ವರ್ಗಾಯಿಸಲು ಆಗ್ರಹಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಆರೋಪಿಗೆ ಸೂಚಿಸಿದೆ.
ಕಥುವಾ ನಗರ ನ್ಯಾಯಾಲಯದಲ್ಲಿ ಶನಿವಾರ ನಡೆಯಲಿದ್ದ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಚಂದ್ರಚೂಡ ಹಾಗೂ ಇಂದು ಮಲ್ಹೋತ್ರ ತಡೆ ನೀಡಿದ್ದಾರೆ. ವಿಚಾರಣೆಯನ್ನು ವರ್ಗಾಯಿಸುವ ಮನವಿಯ ವಿಚಾರಣೆಯನ್ನು ಮೇ 7ರಂದು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಕರಣವನ್ನು ಚತ್ತೀಸ್ಗಢಕ್ಕೆ ವರ್ಗಾಯಿಸುವುದನ್ನು ವಿರೋಧಿಸಿರುವ ಜಮ್ಮು ಹಾಗೂ ಕಾಶ್ಮೀರ ಸರಕಾರ, ಇದರಲ್ಲಿ ಹಲವು ದಂಡ ಸಂಹಿತೆಗಳು ಇವೆ ಹಾಗೂ ವಿಚಾರಣೆಯನ್ನು ವರ್ಗಾಯಿಸುವುದರಿಂದ ಸಾಕ್ಷಿಗಳಿಗೆ ಅನಾನುಕೂಲತೆ ಉಂಟಾಗಲಿದೆ ಎಂದಿದೆ.
ಈ ನಡುವೆ, ನಮ್ಮಿಂದ ಏನೆಲ್ಲಾ ಸಹಾಯ ಬೇಕೋ ಅದೆಲ್ಲವನ್ನು ನೀಡುತ್ತೇವೆ ಎಂದು ಕೇಂದ್ರ ಸರಕಾರ ಶುಕ್ರವಾರ ಹೇಳಿದೆ. ತನಿಖೆಯನ್ನು ಜಮ್ಮು ಹಾಗೂ ಕಾಶ್ಮೀರ ಪೊಲೀಸರಿಂದ ಸಿಬಿಐ ವರ್ಗಾಯಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ ಮನವಿ ಹಾಗೂ ಅದನ್ನು ವಿರೋಧಿಸಿ ಬಾಲಕಿಯ ತಂದೆ ಸಲ್ಲಿಸಿದ ಮನವಿಗೆ ಸಂಬಂಧಿಸಿ ಕೇಂದ್ರ ಸರಕಾರ ಈ ಪ್ರತಿಕ್ರಿಯೆ ನೀಡಿದೆ.