ಕೆಂಪುಕೋಟೆ ನಂತರ ಜಲಿಯನ್ ವಾಲಾಭಾಗ್ ಸ್ಮಾರಕ ದತ್ತು ಯೋಜನೆಗೆ
ಪ್ರವಾಸೋದ್ಯಮ ಸಚಿವಾಲಯಕ್ಕೆ ಪಂಜಾಬ್ ಸರ್ಕಾರ ಪತ್ರ
ಹೊಸದಿಲ್ಲಿ, ಮೇ 6: ಐತಿಹಾಸಿಕ ಕೆಂಪುಕೋಟೆಯ ಪ್ರವಾಸಿ ಸೌಲಭ್ಯಗಳ ನಿರ್ವಹಣೆಯನ್ನು ಖಾಸಗಿಗೆ ವಹಿಸುವ ಸರ್ಕಾರದ ನಿರ್ಧಾರ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಪಂಜಾಬ್ನ ಕಾಂಗ್ರೆಸ್ ಸರ್ಕಾರ, ರಾಜ್ಯದ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳನ್ನು "ಪರಂಪರೆ ತಾಣ ದತ್ತು" ಯೋಜನೆಯಡಿ ಸೇರಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಪತ್ರ ಬರೆದಿದೆ. ಇದರಲ್ಲಿ ಜಲಿಯನ್ವಾಲಾಭಾಗ್ ಹಾಗೂ ಗುರುದ್ವಾರ ಆನಂದಪುರ್ ಸಾಹಿಬ್ ಸೇರಿದೆ.
ದಾಲ್ಮಿಯಾ ಭಾರತ್ ಸಮೂಹಕ್ಕೆ ಕೆಂಪುಕೋಟೆ ನಿರ್ವಹಣೆಯ ಉಸ್ತುವಾರಿ ವಹಿಸುವುದನ್ನು ಕಾಂಗ್ರೆಸ್ ಪಕ್ಷ ಕಳೆದ ವಾರ ತೀವ್ರವಾಗಿ ವಿರೋಧಿಸಿತ್ತು. ಸ್ವಾತಂತ್ರ್ಯ ಚಳವಳಿಯ ಸಂಕೇತವಾದ ಈ ಸ್ಮಾರಕವನ್ನು ಖಾಸಗಿಗೆ ವಹಿಸುವುದು ದುರದೃಷ್ಟಕರ ಎಂದು ಟೀಕಿಸಿತ್ತು. ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಮುಖ ಸ್ಮಾರಕಗಳನ್ನು ವಹಿಸಬಾರದು ಎಂದು ಆಗ್ರಹಿಸಿತ್ತು.
ಈ ಮಧ್ಯೆ 2018ರ ಫೆಬ್ರವರಿ 20ರಂದು ಕೇಂದ್ರಕ್ಕೆ ಪತ್ರ ಬರೆದಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಈ ಯೋಜನೆಯಡಿ ಏಳು ಸ್ಮಾರಕಗಳನ್ನು ಪರಿಗಣಿಸುವಂತೆ ಕೋರಿದೆ. ಇದರಲ್ಲಿ ಜಲಿಯನ್ ವಾಲಾಭಾಗ್, ಕತ್ಕರ್ ಕಾಲಂ ಶಹೀದ್ ಇ ಅಜಮ್ ಸರ್ದಾರ್ ಭಗತ್ ಸಿಂಗ್ ಮ್ಯೂಸಿಯಂ, ಲೂಧಿಯಾನಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕ, ಗುರುದಾಸ್ಪುರದ ತಖ್ತ್ ಐ ಅಕ್ಬರ್, ಗುರುದ್ವಾರ ಶ್ರೀ ಆನಂದಪುರ್ ಸಾಹಿಹ್, ಗುರುದ್ವಾರ ಶ್ರೀ ಫತೇಗಡ್ ಸಾಹಿಬ್ ಮತ್ತು ಗುರುದ್ವಾರ ಶ್ರೀ ಚಮ್ಕೌರ್ ಸಾಹಿಬ್ ಸೇರಿವೆ.