ಶ್ರೀನಗರ: ಭದ್ರತಾ ಪಡೆ ಹಾಗೂ ನಾಗರಿಕರ ನಡುವೆ ಘರ್ಷಣೆ; ಐವರು ನಾಗರಿಕರ ಸಾವು
ಶ್ರೀನಗರ, ಮೇ 6: ಉಗ್ರರ ಹತ್ಯೆ ಬಳಿಕ ದಕ್ಷಿಣ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆ ಹಾಗೂ ನಾಗರಿಕರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಐವರು ನಾಗರಿಕರು ಮೃತಪಟ್ಟಿದ್ದಾರೆ.
ಶ್ರೀನಗರದ ಛಟ್ಟಾಬಾಲ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಐವರು ಉಗ್ರರು ಹತರಾದ ಬಳಿಕ ಬಡಿಗಾಂವ್, ಶೋಪಿಯಾನ ಹಾಗೂ ಇತರೆಡೆ ಘರ್ಷಣೆ ಆರಂಭವಾಯಿತು. ನೂರ್ಬಾಘ್ ಸಮೀಪ ನಡೆದ ಕಲ್ಲು ತೂರಾಟದ ಸಂದರ್ಭ ಪೊಲೀಸರ ಬಂಕರ್ ವಾಹನ ಢಿಕ್ಕಿ ಹೊಡೆದು ಸ್ಥಳೀಯ ಯುವಕನೋರ್ವ ಮೃತಪಟ್ಟಿದ್ದಾನೆ. 21 ವರ್ಷದ ಇನ್ನೋರ್ವ ಯುವಕ ಆಸಿಫ್ ಅಹ್ಮದ್ ಮಿರ್ಗೆ ಗುಂಡು ತಗುಲಿ ಶ್ರೀನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನಾಗ್ಬಾಲ್ (ಶೋಪಿಯಾನ)ನಲ್ಲಿ ಭದ್ರತಾ ಪಡೆಯ ಗುಂಡಿಗೆ ಪುಲ್ವಾಮ ರಾಜಪೊರಾದ ನಿವಾಸಿ ಝುಬೈರ್ ಅಹ್ಮದ್ ಮೃತಪಟ್ಟಿದ್ದಾನೆ. ಇನ್ನೊಂದು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನಾಸೀರ್ ಅಹ್ಮದ್ ಕುಮ್ಹರ್ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಭದ್ರತಾ ಪಡೆಯ ಗುಂಡಿನ ದಾಳಿಗೆ ಮೃತಪಟ್ಟ ಇನ್ನಿಬ್ಬರೆಂದರೆ ಅನಂತ್ನಾಗ್ ಜಿಲ್ಲೆಯ ದೂರುನ ವೆರಿನಾಗ್ ನಿವಾಸಿ ಸಾಜದ್ ಅಹ್ಮದ್ ರಾಥರ್ ಹಾಗೂ ಕುಲ್ಗಾಂವ್ನ ಮಹಿಗುಂಡ್ ಅಸ್ಮುಜಿ ಗ್ರಾಮದ ನಿವಾಸಿ ಆದಿಲ್ ಅಹ್ಮದ್.