ಯುಪಿಎ ಸಾಧನೆಯಿಂದ ಆದ ಅಭಿವೃದ್ಧಿಯನ್ನು ಮೋದಿ ಸರಕಾರ ಹಾಳು ಮಾಡಿ ಹಾಕಿದೆ : ಮನಮೋಹನ್ ಸಿಂಗ್
ಬೆಂಗಳೂರು,ಮೇ.7 : ಹಿಂದಿನ ಯುಪಿಎ ಸರಕಾರ ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮೋದಿ ಸರಕಾರ ಹಾಳು ಮಾಡಿ ಹಾಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಡನೆ ಮಾತನಾಡಿದ ಸಿಂಗ್, ಕೇಂದ್ರದ ಮೋದಿ ನೇತೃತ್ವದ ಎನ್ಡಿಎ ಸರಕಾರ ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದಿದ್ದಾರೆ. "ನನಗೆ ನೀಡಿದ ಸಲಹೆಯನ್ನು ಮೋದಿ ಖುದ್ದಾಗಿ ಪಾಲಿಸಬೇಕು, ದುರದೃಷ್ಟವಶಾತ್ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ'' ಎಂದರು.
"ಭಾರತದ ಪ್ರಧಾನಿಯೊಬ್ಬರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಿರುವುದು ಆಘಾತಕಾರಿ. ಮೋದಿಯವರ ರೀತಿಯಲ್ಲಿ ಯಾವುದೇ ಪ್ರಧಾನಿ ಈ ಹಿಂದೆ ಮಾತನಾಡಿಲ್ಲ. ಅವರು ಕರ್ನಾಟಕದ ಜನತೆಯನ್ನು ಧ್ರುವೀಕರಿಸಲು ಯತ್ನಿಸಬಾರದು,'' ಎಂದರು.
"ಭಾರತದ ಆರ್ಥಿಕತೆಯ ಬಗೆಗಿರುವ ವಾಸ್ತವಗಳನ್ನು ಮರೆಮಾಚಿ ಮೋದಿ ಸರಕಾರ ಉದ್ದೇಶಪೂರ್ವಕವಾಗಿ ಸುಂದರ ಚಿತ್ರಣ ನೀಡುತ್ತಿದೆ," ಎಂದು ದೂರಿದ ಮನಮೋಹನ್ ಸಿಂಗ್ "ನಿಜವಾದ ನಾಯಕತ್ವ ಅವಕಾಶಗಳನ್ನು ಸೃಷ್ಟಿಸುತ್ತದೆಯೇ ವಿನಹ ಅವುಗಳನ್ನು ನಾಶ ಪಡಿಸುವುದಿಲ್ಲ'' ಎಂದು ಮೋದಿ ಸರಕಾರದ ಅಡಿಯಲ್ಲಿ ಕುಸಿಯುತ್ತಿರುವ ಉದ್ಯೋಗ ಪ್ರಮಾಣ ಉಲ್ಲೇಖಿಸಿ ಅವರು ಹೇಳಿದರು.
"ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದಾಗ ಪ್ರಧಾನಿ 70 ವರ್ಷಗಳ ಕಾಂಗ್ರೆಸ್ ಆಳ್ವಿಕೆಯನ್ನು ದೂಷಿಸುತ್ತಾರೆ. ಅವರು ಹಸಿರು ಕ್ರಾಂತಿಯನ್ನು ಮರೆತಿದ್ದಾರೆ ಹಾಗೂ ಲಕ್ಷಗಟ್ಟಲೆ ಜನರನ್ನು ಬಡತನದಿಂದ ಹೊರತಂದ ಯುಪಿಎ ಸರಕಾರಗಳ ನೀತಿಗಳ ಬಗ್ಗೆಯೂ ಅವರು ಮರೆತಿದ್ದಾರೆ,'' ಎಂದು ಸಿಂಗ್ ಹೇಳಿದರು.