ಡೇರಾ ಅನುಯಾಯಿಯ ಕೊಲೆಯಲ್ಲೂ ಗುರ್ಮೀತ್ ಶಾಮೀಲು: ಮಾಜಿ ಚಾಲಕನಿಂದ ಸಿಬಿಐ ನ್ಯಾಯಾಲಯದ ಮುಂದೆ ಸಾಕ್ಷ್ಯ
ಪಂಚಕುಲ, ಮೇ 9: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ನ ಮಾಜಿ ಚಾಲಕ ಖಟ್ಟಾ ಸಿಂಗ್ ಇಂದು ಇಲ್ಲಿನ ಸಿಬಿಐ ನ್ಯಾಯಾಲಯದೆದುರು ಹಾಜರಾಗಿ ಡೇರಾ ಅನುಯಾಯಿ ರಂಜಿತ್ ಸಿಂಗ್ ಎಂಬಾತನ ಕೊಲೆಯಲ್ಲೂ ಗುರ್ಮೀತ್ ಭಾಗಿಯಾಗಿದ್ದಾನೆಂಬುದಕ್ಕೆ ಸಾಕ್ಷ್ಯ ನುಡಿದಿದ್ದಾನೆ.
ಸಿರ್ಸಾದಲ್ಲಿನ ಡೇರಾ ಮುಖ್ಯ ಕಾರ್ಯಾಲಯದಲ್ಲಿರುವ ತನ್ನ ಗುಹೆಯಲ್ಲಿ ಜೂನ್ 16,2002ರಂದು ತನ್ನ ಸಹವರ್ತಿಗಳ ಸಭೆಯೊಂದರಲ್ಲಿ ರಂಜಿತ್ ನನ್ನು ಕೊಲ್ಲಲು ಗುರ್ಮೀತ್ ಆದೇಶಿಸಿದ್ದನೆಂದು ಹಾಗೂ ಆಗ ತಾನು ಕೂಡ ಅಲ್ಲಿದ್ದುದಾಗಿ ಖಟ್ಟಾ ಸಿಂಗ್ ನ್ಯಾಯಾಲಯದೆದುರು ತಿಳಿಸಿದ್ದಾನೆ. ತನ್ನ ಸೋದರಿಯನ್ನು ಗುರ್ಮೀತ್ ಲೈಂಗಿಕವಾಗಿ ಬಳಸಿಕೊಂಡಿದ್ದನೆಂದು ತಿಳಿದ ನಂತರ ರಂಜಿತ್ ಆತನ ವಿರುದ್ಧ ಹೋಗಿದ್ದನೆಂದು ಗುರ್ಮೀತ್ ಗೆ ಶಂಕೆ ಮೂಡಿದ್ದೇ ಆತನ ಕೊಲೆಗೆ ಕಾರಣವೆಂದು ಖಟ್ಟಾ ಹೇಳಿದ್ದಾನೆ.
ಡೇರಾದಲ್ಲಿನ ಸಾಧ್ವಿಗಳ ಮೇಲೆ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅನಾಮಿಕ ಪತ್ರವೊಂದು ಹರಿದಾಡಲು ಕೂಡ ರಂಜಿತ್ ನೇ ಕಾರಣವೆಂದು ಗುರ್ಮೀತ್ ನಂಬಿದ್ದನೆಂದು ಖಟ್ಟಾ ತಿಳಿಸಿದ್ದಾನೆ. ಕಳೆದ ವರ್ಷ ಗುರ್ಮೀತ್ 20 ವರ್ಷ ಜೈಲು ಶಿಕ್ಷೆ ಪಡೆಯಲು ಇದು ಪ್ರಮುಖ ಕಾರಣವಾಗಿತ್ತಲ್ಲದೆ ರಂಜಿತ್ ಸೋದರಿ ಕೂಡ ಆತನ ವಿರುದ್ಧ ಸಾಕ್ಷ್ಯ ನುಡಿದಿದ್ದಳು.
ಖಟ್ಟಾ ಸಾಕ್ಷ್ಯ ನುಡಿಯುವಾಗ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರ್ಮೀತ್ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದ. ಖಟ್ಟಾ ಸಿಂಗ್ ಮೇ 15ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದು ಆಗ ಪ್ರತಿವಾದಿ ವಕೀಲರು ಆತನನ್ನು ಪಾಟೀ ಸವಾಲಿಗೊಡ್ಡಲಿದ್ದಾರೆ. ರಂಜಿತ್ ನನ್ನು ಆತನ ಹುಟ್ಟೂರಾದ ಕುರುಕ್ಷೇತ್ರದ ಖಾನ್ಪುರ್ ಕೊಲಿಯನ್ ಗ್ರಾಮದಲ್ಲಿ ಜುಲೈ 10, 2002ರಂದು ಕೊಲೆಗೈಯ್ಯಲಾಗಿತ್ತು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಚಹಾ ನೀಡಿ ತನ್ನ ಮೋಟಾರ್ ಸೈಕಲ್ ನಲ್ಲಿ ಹಿಂದಿರುಗುತ್ತಿದ್ದ ರಂಜಿತ್ ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆತನಿಗೆ ಗುಂಡಿಕ್ಕಿ ಪರಾರಿಯಾಗಿದ್ದರು.
ತನಗೆ ರಂಜಿತ್ ಬಹಳ ವರ್ಷಗಳಿಂದ ಗೊತ್ತು, ಆತನ ಪುತ್ರಿಯರು ಮತ್ತು ಸೋದರಿ ಡೇರಾದಲ್ಲಿಯೇ ಇದ್ದರೂ ಅವರನ್ನು 2001ರಲ್ಲಿ ಆತ ಅಲ್ಲಿಂದ ಹಿಂದಕ್ಕೆ ಕರೆದುಕೊಂಡು ಬಂದಿದ್ದ. ನಂತರ ತನ್ನ ಸೋದರಿಯ ಮೇಲೆ ಗುರ್ಮೀತ್ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದು ಆತ ಸಿಟ್ಟುಗೊಂಡಿದ್ದ. ಈ ಬಗ್ಗೆ ತಿಳಿದಿದ್ದ ಗುರ್ಮೀತ್ ಒಮ್ಮೆ ಆತನಿಗೆ ಕರೆ ಕಳುಹಿಸಿ ಎಚ್ಚರಿಕೆ ನೀಡಿದ್ದರೂ ಫಲ ನೀಡದೇ ಇದ್ದಾಗ ಆತನ ಹತ್ಯೆ ನಡೆದಿತ್ತು ಎಂದು ಖಟ್ಟಾ ತಿಳಿಸಿದ್ದಾನೆ. ಡೇರಾ ಮುಖ್ಯಸ್ಥ ಪ್ರಮುಖ ಆರೋಪಿಯಾಗಿರುವ ಪತ್ರಕರ್ತನ ಕೊಲೆ ಪ್ರಕರಣವೊಂದರಲ್ಲೂ ಖಟ್ಟಾ ಮೇ 5ರಂದು ಸಾಕ್ಷ್ಯ ನುಡಿದಿದ್ದ.