ದಲಿತ ವಿದ್ಯಾರ್ಥಿಗೆ ಹಲ್ಲೆ: ಮಾನವ ಹಕ್ಕು ಆಯೋಗದಿಂದ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್
ಹೊಸದಿಲ್ಲಿ, ಮೇ.9: 19ರ ಹರೆಯದ ದಲಿತ ವಿದ್ಯಾರ್ಥಿ ಮತ್ತಾತನ 16ರ ಹರೆಯದ ಸಂಬಂಧಿಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸ್ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ.
ಪೊಲೀಸರ ಪ್ರಕಾರ ಬಗ್ಪತ್ ಜಿಲ್ಲೆಯ ಕಮಲ ಗ್ರಾಮದ ಗುಜ್ಜರ್ ಸಮುದಾಯದ ಮಹಿಳೆ ಮತ್ತು ದಲಿತ ವ್ಯಕ್ತಿಯ ಮಧ್ಯೆಯಿದ್ದ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಗುಜ್ಜರ್ ಸಮುದಾಯದ ಜನರು ಪ್ರತೀಕಾರ ತೀರಿಸಲು ಈ ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆದಿರುವುದು ಸತ್ಯವಾಗಿದ್ದರೆ ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ತಿಳಿಸಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಸೋಮವಾರದಂದು ಅಂಗಾಂಗ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆಯ ನಂತರ ದಲಿತರು ಗ್ರಾಮವನ್ನು ತೊರೆಯುತ್ತಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಈ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಸೂಚಿಸುತ್ತದೆ. ಮೇಲ್ವರ್ಗದ ಜನರು ದಲಿತ ಸಮುದಾಯದ ಜನರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ಇದು ಸಾಕ್ಷಿಯಾಗಿದೆ ಎಂದು ಆಯೋಗದ ವರದಿ ತಿಳಿಸಿದೆ.