ದಿಲ್ಲಿಯಲ್ಲಿ ಭಾರೀ ಧೂಳಿನ ಬಿರುಗಾಳಿ, ಮಳೆ: ವಿಮಾನ ಹಾರಾಟ ಸ್ಥಗಿತ, ಬುಡಮೇಲಾದ ಮರಗಳು
ಹೊಸದಿಲ್ಲಿ, ಮೇ 13: ಧೂಳಿನಿಂದ ಕೂಡಿದ ಪ್ರಬಲ ಬಿರುಗಾಳಿ ಹಾಗೂ ಮಳೆ ರವಿವಾರ ಸಂಜೆ ದಿಲ್ಲಿಗೆ ಅಪ್ಪಳಿಸಿತು. ಇದರಿಂದ ವಿಮಾನಗಳ ಹಾರಾಟ ರದ್ದುಗೊಂಡಿತು. ಮರಗಳು ಉರುಳಿದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತು.
ಗಾಳಿ ವೇಗ ಗಂಟೆಗೆ 50ರಿಂದ 70 ಕಿ.ಮೀ. ಇತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾ ಯಿತು. ಕನಿಷ್ಠ 10 ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಯಿತು. ದಿಲ್ಲಿ ಮೆಟ್ರೊ ನೋಯ್ಡೊ ದ್ವಾರಕಾದಲ್ಲಿ 30 ನಿಮಿಷಗಳ ಕಾಲ ಸ್ಥಗಿತಗೊಂಡು ಸಂಚಾರ ಸೇವೆಗೆ ಅಡ್ಡಿ ಉಂಟಾಯಿತು.
ಸಂಜೆ 5 ಗಂಟೆಗೆ ಪ್ರಬಲ ಗಾಳಿ ಬೀಸಿತು. ಕೆಲವು ಮರಗಳು ಬುಡಮೇಲಾದವು. ಕೂಡಲೇ ಮಳೆ ಹನಿಯಲು ಆರಂಭವಾಯಿತು. ತೆರೆದ ಪ್ರದೇಶಗಳಲ್ಲಿ ಜನರು ಆಶ್ರಯ ಹುಡುಕಿಕೊಡು ಓಡುವುದು ಕಂಡು ಬಂತು. ಇದ್ದಕ್ಕಿಂತ ಬೀಸಿದ ಪ್ರಬಲ ಗಾಳಿಯಿಂದ ಮಾರುಕಟ್ಟೆಯಲ್ಲಿದ್ದ ಜನರು ಆಂತಕಗೊಂಡರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಾಲ್ಗೊಂಡಿದ್ದ ಪೂರ್ವ ದಿಲ್ಲಿಯ ಐಪಿ ವಿಸ್ತರಣೆ ಕಾರ್ಯಕ್ರಮಕ್ಕೆ ಧೂಳಿನ ಬಿರುಗಾಳಿಯಿಂದ ಅಡ್ಡಿ ಉಂಟಾಯಿತು.