ವಿತ್ತಸಚಿವ ಅರುಣ್ ಜೇಟ್ಲಿ ಅವರಿಗೆ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ
ಹೊಸದಿಲ್ಲಿ,ಮೇ 14: ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿಯವರಿಗೆ ಸೋಮವಾರ ಬೆಳಿಗ್ಗೆ ಇಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
65ರ ಹರೆಯದ ಜೇಟ್ಲಿಯವರು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು.ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕಳೆದೊಂದು ತಿಂಗಳಿನಿಂದ ಡಯಾಲಿಸಿಸ್ ನಡೆಸಲಾಗುತ್ತಿತ್ತು. 10ನೇ ಭಾರತ -ಬ್ರಿಟನ್ ಆರ್ಥಿಕ ಮತ್ತು ಹಣಕಾಸು ಮಾತುಕತೆಗಳಿಗಾಗಿ ತನ್ನ ಮುಂದಿನ ವಾರದ ನಿಗದಿತ ಲಂಡನ್ ಭೇಟಿಯನ್ನು ರದ್ದುಗೊಳಿಸಿದ್ದ ಜೇಟ್ಲಿ, ಮೂತ್ರಪಿಂಡ ಸಮಸ್ಯೆಗಳಿಗಾಗಿ ತಾನು ಚಿಕಿತ್ಸೆ ಪಡೆಯುತ್ತಿದ್ದು, ಸೋಂಕುಪೀಡಿತನಾಗಿದ್ದೇನೆ ಎಂದು ಎ.6ರಂದು ಟ್ವೀಟ್ನಲ್ಲಿ ತಿಳಿಸಿದ್ದರು. ಮಧುಮೇಹ ರೋಗಿಯಾಗಿರುವ ಜೇಟ್ಲಿಯವರು ಸೆಪ್ಟೆಂಬರ್ 2014ರಲ್ಲಿ ದೇಹತೂಕವನ್ನು ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.
Next Story