ಕರ್ನಾಟಕದಲ್ಲಿ ಭಾರತದ ‘ಪ್ರಪ್ರಥಮ ವಾಟ್ಸಾಪ್ ಚುನಾವಣೆ’: ವಿದೇಶಿ ಮಾಧ್ಯಮಗಳು
ಹೊಸದಿಲ್ಲಿ,ಮೇ 15: ಇಂದಿನ ಚುನಾವಣೆಗಳಲ್ಲಿ ಚರ್ಚೆಗಳು,ಬಹಿರಂಗ ಸಭೆಗಳು ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿವೆ. ಇಂದು ಭಾರತದಲ್ಲಿ ಚುನಾವಣೆಗಳನ್ನು ವಾಟ್ಸಾಪ್ ವೇದಿಕೆಯಲ್ಲಿ ಹೋರಾಡಲಾಗುತ್ತಿದೆ. ದೇಶದಲ್ಲಿ ಕೋಟ್ಯಂತರ ಜನರು ಫೇಸ್ಬುಕ್ ಒಡೆತನದ ಈ ಆ್ಯಪ್ ಬಳಸುತ್ತಿದ್ದಾರೆ.
ಆದರೆ ವಾಟ್ಸಾಪ್ ಒಳಿತಿನಷ್ಟೇ ಕೆಡುಕುಗಳನ್ನೂ ಮಾಡುತ್ತಿದೆ. ಸುಳ್ಳುಸುದ್ದಿಗಳು,ಧಾರ್ಮಿಕ ದ್ವೇಷವನ್ನು ಹರಡಲು ವಾಟ್ಸಾಪ್ನ್ನು ಮುಕ್ತ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಮತ್ತು ಅದರಲ್ಲಿ ಹರಿದಾಡುವ ವಿಷಯಗಳಿಗೆ ಸೆನ್ಸಾರ್ನ ಹಂಗೂ ಇಲ್ಲ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ವಾಟ್ಸಾಪ್ನ್ನು ವ್ಯಾಪಕವಾಗಿ ಬಳಸಿಕೊಂಡಿದ್ದು, ಇದು ಭಾರತದ ‘‘ಮೊದಲ ವಾಟ್ಸಾಪ್ ಚುನಾವಣೆ’’ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. ತಾವು ತಲಾ 20,000ಕ್ಕೂ ಅಧಿಕ ವಾಟ್ಸಾಪ್ ಗುಂಪುಗಳನ್ನು ಹೊಂದಿದ್ದು,ತಮ್ಮ ಒಂದೂವರೆ ಮಿಲಿಯನ್ಗಿಂತಲೂ ಅಧಿಕ ಬೆಂಬಲಿಗರನ್ನು ಕ್ಷಣಮಾತ್ರದಲ್ಲಿ ತಲುಪಬಲ್ಲೆವು ಎಂದು ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿಕೊಂಡಿದ್ದವು. ಆದರೆ ಹೀಗೆ ರವಾನಿಸಲ್ಪಟ್ಟಿದ್ದ ಕೆಲವು ಸಂದೇಶಗಳು ಸುಳ್ಳು ಮತ್ತು ಪ್ರಚೋದನಕಾರಿಯಾಗಿದ್ದು,ರಾಜಕೀಯ ಎದುರಾಳಿಗಳ ಹೇಳಿಕೆಗಳನ್ನು ತಿರುಚಲಾಗಿತ್ತು ಹಾಗೂ ಹಿಂದು ರಾಷ್ಟ್ರವಾದಿಗಳು ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಷ್ಟೇ ಇವುಗಳ ಸಾಧನೆಯಾಗಿತ್ತು.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮತ್ತು ನಂತರ ರಷ್ಯಾದ ಅಪಪ್ರಚಾರ,ಸುಳ್ಳುಸುದ್ದಿಗಳು ಮತ್ತು ದ್ವೇಷಭಾಷಣಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಳ್ಳುವ ಮೂಲಕ ಮಾತೃಸಂಸ್ಥೆ ಫೇಸ್ಬುಕ್ ಪ್ರಜಾಪ್ರಭುತ್ವವನ್ನು ಕಡೆಗಣಿಸಿದೆ ಎಂಬ ಆರೋಪವನ್ನು ಹೊತ್ತಿರುವ ಸಂದರ್ಭದಲ್ಲಿಯೇ ಭಾರತದ ‘ಪ್ರಪ್ರಥಮ ವಾಟ್ಸಾಪ್ ಚುನಾವಣೆ’ ನಡೆದಿದೆ. ಮ್ಯಾನ್ಮಾರ್ ಮತ್ತು ಶ್ರೀಲಂಕಾಗಳಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಫೇಸ್ಬುಕ್ನಲ್ಲಿಯ ಸುಳ್ಳುಸುದ್ದಿಗಳು ದಂಗೆಗಳು,ಹತ್ಯೆಗಳು ಮತ್ತು ಧಾರ್ಮಿಕ ಹಿಂಸಾಚಾರಗಳಿಗೆ ಕಾರಣವಾಗಿವೆ. ಅಮೆರಿಕದಲ್ಲಿ ರಷ್ಯನ್ ಏಜೆಂಟರ ವಾಟ್ಸಾಪ್ ಖಾತೆಗಳು 126 ಮಿಲಿಯನ್ ಜನರ ಜೊತೆಗೆ ಸುಳ್ಳು ಮತ್ತು ವಿಭಜನಕಾರಿ ಸಂದೇಶಗಳನ್ನು ಶೇರ್ ಮಾಡಿಕೊಂಡಿದ್ದವು.
ಜಗತ್ತಿನಾದ್ಯಂತ 150 ಕೋಟಿ ಜನರು ವಾಟ್ಸಾಪ್ನ್ನು ಬಳಸುತ್ತಿದ್ದಾರೆ. ಅದರಲ್ಲಿಯ ಎನ್ಕ್ರಿಪ್ಟೆಡ್ ಸಂದೇಶಗಳನ್ನು ಓದಲು ಕಂಪನಿಯ ಅಧಿಕಾರಿಗಳಿಗೂ ಸಾಧ್ಯವಿಲ್ಲ. ಆದರೆ ಇದು ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಸವಾಲನ್ನು ಒಡ್ಡಿದೆ ಎನ್ನುವುದು ವಿಶ್ವದ ಹಲವೆಡೆಗಳ ಡಿಜಿಟಲ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ವಾಟ್ಸಾಪ್ನ ಎಷ್ಟೋ ಬಳಕೆದಾರರು ಇಂಟರ್ನೆಟ್ಗೆ ಹೊಸಬರಾಗಿದ್ದಾರೆ ಮತ್ತು ಅವರು ಕಂಪ್ಯೂಟರ್ ಸಾಕ್ಷರರಲ್ಲ. ಹೀಗಾಗಿ ವಾಟ್ಸಾಪ್ ತುಂಬ ಸುಲಭವಾಗಿ ದುರ್ಬಳಕೆಗೆ ಪಕ್ಕಾಗುತ್ತಿದೆ. ಅಲ್ಲದೆ ಸಂದೇಶಗಳು ಖಾಸಗಿ ಗುಂಪುಗಳ ಮಧ್ಯೆ ಹರಿದಾಡುವುದರಿಂದ ಸುಳ್ಳು ಸುದ್ದಿಗಳನ್ನು ತಿದ್ದುವುದೂ ಹೆಚ್ಚಿನ ಜನರಿಗೆ ಕಠಿಣವಾಗಿದೆ.
ಪರಿಸ್ಥಿತಿ ಕೈ ಮೀರುತ್ತಿದೆ ಮತ್ತು ಈ ಬಗ್ಗೆ ಏನು ಮಾಡಬೇಕು ಎನ್ನುವುದು ಸ್ವತಃ ವಾಟ್ಸಾಪ್ಗೂ ಗೊತ್ತಾಗುತ್ತಿಲ್ಲ ಎಂದು ಹೇಳಿದ ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ ಪಹ್ವಾ ಅವರು,ಇಂತಹ ಸುಳ್ಳುಸುದ್ದಿಗಳು ಹೇಗೆ ಹರಡುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಾಗಿರುವುದೇ ವಾಟ್ಸಾಪ್ನ ಸಮಸ್ಯೆಯಾಗಿದೆ. ಸುಳ್ಳುಸುದ್ದಿಗಳನ್ನು ಹರಡುವುದು ರಾಜಕೀಯ ಪಕ್ಷಗಳಿಗೆ ಸುಲಭವಾಗಿದೆ ಮತ್ತು ಅವುಗಳ ಸೃಷ್ಟಿಕರ್ತರು ಅವರೇ ಎನ್ನುವುದನ್ನು ಯಾರೂ ಪತ್ತೆ ಹಚ್ಚಲಾರರು ಎಂದರು.
ಅಮೆರಿಕದಲ್ಲಿ ವಾಟ್ಸಾಪ್ ಅಷ್ಟಾಗಿ ಬಳಕೆಯಾಗುವುದಿಲ್ಲ ಮತ್ತು ಫೇಸಬುಕ್ 2014ರಲ್ಲಿ 19 ಶತಕೋಟಿ ಡಾಲರ್ಗಳಿಗೆ ಅದನ್ನು ಖರೀದಿಸಿದಾಗ ಹೆಚ್ಚಿನವರು ಅಚ್ಚರಿಗೊಂಡಿದ್ದರು. ಆದರೆ ವಿಶ್ವದ ಹಲವೆಡೆಗಳಲ್ಲಿ ಫೇಸ್ಬುಕ್ಗಿಂತ ವಾಟ್ಸಾಪ್ ಹೆಚ್ಚು ಜನಪ್ರಿಯವಾಗಿರುವದರಿಂದ ಅದನ್ನು ಖರೀದಿಸಲು ಫೆಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕೆರ್ಬರ್ಗ್ ಬಯಸಿದ್ದರು.
ಬ್ರೆಝಿಲ್ ಮತ್ತು ಮೆಕ್ಸಿಕೋದಂತಹ ಸ್ಥಳಗಳಲ್ಲಿ ವಾಟ್ಸಾಪ್ ಕೇವಲ ಸಂದೇಶವಾಹಕವಾಗಿಲ್ಲ. ಕರೆಗಳನ್ನು ಮಾಡಲು,ವ್ಯವಹಾರಗಳನ್ನು ನಡೆಸಲೂ ಅದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಭಾರತವು ವಾಟ್ಸಾಪ್ನ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು,ಇಲ್ಲಿ 20 ಕೋಟಿಗೂ ಅಧಿಕ ಜನರು ಅದನ್ನು ಬಳಸುತ್ತಿದ್ದಾರೆ. 2018ರ ಆರಂಭದಲ್ಲಿ 20 ಶತಕೋಟಿಗೂ ಅಧಿಕ ಹೊಸವರ್ಷದ ಶುಭಾಶಯಗಳು ವಾಟ್ಸಾಪ್ ಮೂಲಕ ರವಾನೆಯಾಗಿದ್ದವು. ಇನ್ನಷ್ಟು ಜನರನ್ನು ತಲುಪಲು ವಾಟ್ಸಾಪ್ ಈಗ ತನ್ನ ಹೊಸ ಪೇಮೆಂಟ್ಸ್ ಫೀಚರ್ನ್ನು ಪರೀಕ್ಷಿಸುತ್ತಿದೆ.
ಅಂದ ಹಾಗೆ ಭಾರತದಲ್ಲಿ ಆರಂಭದಿಂದಲೇ ಗುಂಪು ಹಿಂಸಾಚಾರವನ್ನು ಪ್ರಚೋದಿಸಲು ವಾಟ್ಸಾಪ್ ಸಂದೇಶಗಳು ಬಳಕೆಯಾಗುತ್ತಿವೆ. ಕಳೆದ ವಾರವಷ್ಟೇ ಮಕ್ಕಳ ಅಪಹರಣ ಕುರಿತು ವಾಟ್ಸಾಪ್ನಲ್ಲಿ ಹರಿದಾಡಿದ್ದ ವದಂತಿಗಳು ತಮಿಳುನಾಡಿನಲ್ಲಿ ಮೂವರ ಹತ್ಯೆಗಳಿಗೆ ಕಾರಣವಾಗಿದ್ದವು.
ಭಾರತದಲ್ಲಿ ಚುನಾವಣೆ ಸಂದರ್ಭ ವಿಷಯಗಳ ಪರಿಶೀಲನೆಗಾಗಿ ಫೇಸ್ಬುಕ್ ಸತ್ಯಶೋಧಕ ವೆಬ್ಸೈಟ್ ಬೂಮ್ನೊಂದಿಗೆ ಕೈಜೋಡಿಸಿತ್ತು. ಆದರೂ ವಾಟ್ಸಾಪ್ನಲ್ಲಿಯ ಪ್ರಚೋದನಕಾರಿ ವಿಷಯಗಳನ್ನು ನಿಯಂತ್ರಿಸುವಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗಿರಲಿಲ್ಲ. ನಾಗರಿಕ ಸಮಾಜದ ಗುಂಪುಗಳನ್ನು ಭೇಟಿಯಾಗಲು ಮತ್ತು ಮುಂದಿನ ವರ್ಷದ ಚುನಾವಣೆಗಳ ಬಗ್ಗೆ ಚರ್ಚಿಸಲು ವಾಟ್ಸಾಪ್ನ ಪ್ರತಿನಿಧಿಗಳು ಇತ್ತೀಚಿಗೆ ಭಾರತದಲ್ಲಿದ್ದರು.