ದೇಶದಲ್ಲಿ ಸಿಹಿನೀರಿನ ಪ್ರಮಾಣ ಕುಸಿತ: ನಾಸಾ ವರದಿ
ಹೊಸದಿಲ್ಲಿ, ಮೇ 18: ನೀರನ್ನು ಅತಿಯಾಗಿ ಬಳಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಭಾರತದಲ್ಲಿ ಸಿಹಿನೀರಿನ ಪ್ರಮಾಣ ಅಪಾಯಕಾರಿ ರೀತಿಯಲ್ಲಿ ಕುಸಿಯುತ್ತಿದೆ ಎಂದು 'ನಾಸಾ'ದ ಉಪಗ್ರಹಗಳು ಭೂಮಿಯ ಕುರಿತು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ. ವಿಶ್ವದಲ್ಲಿ ಸಿಹಿನೀರಿನ ಪ್ರಮಾಣದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಇದರ ಕಾರಣದ ಕುರಿತು ಅಮೆರಿಕದ 'ನಾಸಾ' ವಿಜ್ಞಾನಿಗಳ ನೇತೃತ್ವದಲ್ಲಿ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.
ಭೂಮಿಯ ಒಣಪ್ರದೇಶಗಳು ಮತ್ತಷ್ಟು ಒಣಗುತ್ತಿದ್ದು ಇದಕ್ಕೆ ನೀರಿನ ನಿರ್ವಹಣೆ , ಹವಾಮಾನದ ಬದಲಾವಣೆ ಹಾಗೂ ಪ್ರಾಕೃತಿಕ ಘಟನೆಗಳು ಸೇರಿದಂತೆ ಹಲವು ಕಾರಣಗಳಿವೆ. ಭಾರತದ ಉತ್ತರ ಹಾಗೂ ಪೂರ್ವ ಭಾಗಗಳು, ಮಧ್ಯಪ್ರಾಚ್ಯ ರಾಷ್ಟ್ರಗಳು, ಕ್ಯಾಲಿಫೋರ್ನಿಯ ಮತ್ತು ಆಸ್ಟ್ರೇಲಿಯಾ ದೇಶದಲ್ಲಿ ಸಿಹಿನೀರಿನ ಪ್ರಮಾಣ ಕ್ಷಿಪ್ರವಾಗಿ ಬರಿದಾಗುತ್ತಾ ಸಾಗುತ್ತಿದೆ ಎಂದು 'ದಿ ಗಾರ್ಡಿಯನ್' ಪತ್ರಿಕೆ ವರದಿ ಮಾಡಿದೆ. ಉತ್ತರಭಾರತದಲ್ಲಿ ಮಳೆಯ ಪ್ರಮಾಣ ಕ್ರಮಬದ್ಧವಾಗಿದ್ದರೂ ಗೋಧಿ, ಅಕ್ಕಿ ಮುಂತಾದ ಬೆಳೆಗಳಿಗೆ ನೀರುಣಿಸಲು ಅಂತರ್ಜಲವನ್ನು ಹೊರತೆಗೆಯುವುದರಿಂದ ನೀರಿನ ಲಭ್ಯತೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತಿದೆ. ಮಳೆಗಾಲದಲ್ಲಿ ಅಂತರ್ಜಲದ ಮರುಪೂರಣವು ನೀರನ್ನು ಬಳಸುವ ಪ್ರಮಾಣಕ್ಕಿಂತ ತುಂಬಾ ಕಡಿಮೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಅಂತರ್ಜಲದ ಮಟ್ಟ ಕಳವಳಕಾರಿ ಸ್ಥಿತಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ವಿಶ್ವದಾದ್ಯಂತದ 34 ಪ್ರದೇಶಗಳಲ್ಲಿ ಅಮೆರಿಕ/ಜರ್ಮನಿ ನೇತೃತ್ವದ ತಂಡವು ಸಿಹಿನೀರಿನ ಲಭ್ಯತೆಯ ಕುರಿತ 14 ವರ್ಷ ಅಧ್ಯಯನ ನಡೆಸಿ ವರದಿ ತಯಾರಿಸಿದೆ. ಸಿಹಿ ನೀರು ಕುಡಿಯಲು ಹಾಗೂ ಕೃಷಿಯ ಬಳಕೆಗೆ ಅತ್ಯಗತ್ಯವಾಗಿದೆ. ನೀರಿನ ಲಭ್ಯತೆ, ಬಳಕೆ , ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಾವು ಗಮನಿಸಿದ್ದೇವೆ ಎಂದು 'ನಾಸ'ದ ವಿಜ್ಞಾನಿ ಜೇ ಫ್ಯಮಿಗ್ಲಿಯೆಟಿ ತಿಳಿಸಿದ್ದಾರೆ. ವಿಶ್ವದಲ್ಲಿ ತೇವಭೂಮಿಗಳು ಮತ್ತಷ್ಟು ತೇವಗೊಳ್ಳುತ್ತಾ ಸಾಗುವುದು, ಒಣಪ್ರದೇಶಗಳು ಮತ್ತಷ್ಟು ಒಣಗುತ್ತಾ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಒಣಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಾ ಸಾಗುತ್ತಿದೆ. ಆಲ್ಪ್ ಪ್ರದೇಶದ ಹಿಮನದಿ, ನೀರು ಮಂಜುಗಡ್ಡೆಯಾಗುವುದು ಇತ್ಯಾದಿಗಳಿಗೆ ಹವಾಗುಣದಲ್ಲಿ ಆಗುವ ಬದಲಾವಣೆ ಕಾರಣವಾಗಿದೆ. ಆದರೆ ಸಿಹಿನೀರಿನ ಪ್ರಮಾಣದಲ್ಲಿ ಆಗುವ ಬದಲಾವಣೆಗೆ ಪ್ರಮುಖ ಕಾರಣವನ್ನು ಕಂಡುಹಿಡಿಯಲು ಇನ್ನಷ್ಟು ಸಮಯ ಹಾಗೂ ಅಧ್ಯಯನದ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.