ಕೊಲೆ ಪ್ರಕರಣದ ಸಾಕ್ಷಿ ದಲಿತ ವ್ಯಕ್ತಿಯ ಗುಂಡು ಹಾರಿಸಿ ಹತ್ಯೆ
ಗಾಝಿಯಾಬಾದ್, ಮೇ 18: ಗಾಝಿಯಾಬಾದ್ನ ನೈಫಾಲ್ ಗ್ರಾಮದಲ್ಲಿ ಬೈಕ್ನಲ್ಲಿ ಬಂದ ಐವರು ದುಷ್ಕರ್ಮಿಗಳು ಗುರುವಾರ 40 ವರ್ಷದ ದಲಿತ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳನ್ನು ಸಂತ್ರಸ್ತ ವ್ಯಕ್ತಿಯ ಕುಟುಂಬದ ಸದಸ್ಯರು ಗುರುತು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಲಿತ ವ್ಯಕ್ತಿ ಮಹೇಂದ್ರ ಸಂಜೆ ಖಾಸಗಿ ಶಾಲೆಯ ಆವರಣದಲ್ಲಿ ವಾಹನ ನಿಲ್ಲಿಸಿ, ಬಳಿಕ ಮನಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ ಹೇಳಿದ್ದಾರೆ.
“2009 ಫೆಬ್ರವರಿ 12ರಂದು ವಿವಾಹದ ಮೆರವಣಿಗೆ ಸಂದರ್ಭ ನನ್ನ ತಂದೆ ಸಾಹಿಬ್ ರಾಮ್ ಅವರನ್ನು ಮಹೇಂದ್ರನಿಗೆ ಗುಂಡು ಹಾರಿಸಿ ಹತ್ಯೆ ನಡೆಸಿದ ವ್ಯಕ್ತಿಯ ಸಹೋದರ ಗುಂಡು ಹಾರಿಸಿ ಹತ್ಯೆಗೈದಿದ್ದ” ಎಂದು ಮಹೇಂದ್ರ ಅವರ ಸಹೋದರ ಅನಿಲ್ ಹೇಳಿದ್ದಾರೆ. ಕೆಳಜಾತಿಯ ಜನರ ವಿವಾಹದ ಮೆರವಣಿಗೆಗೆ ಮೇಲ್ಜಾತಿ ಜನರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಹೇಂದ್ರ ಅವರ ತಂದೆಯ ಹತ್ಯೆ ನಡೆದಿತ್ತು. ಈ ಹತ್ಯೆ ವಿಚಾರಣೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹತ್ಯೆ ಪ್ರಮುಖ ಸಾಕ್ಷಿಯಾಗಿರುವ ಮಹೇಂದ್ರ ಸಾಕ್ಷಿ ನುಡಿಯದಂತೆ ತಡೆಯಲು ಈ ಹತ್ಯೆ ನಡೆಸಲಾಗಿದೆ ಎಂದು ಕಷ್ಣ ಹೇಳಿದ್ದಾರೆ. ತಂದೆಯ ಹತ್ಯೆ ಪ್ರಕರಣದಲ್ಲಿ ಯಾವುದೇ ಸಾಕ್ಷಿ ನೀಡದಂತೆ ಕೆಲವು ದಿನಗಳ ಹಿಂದೆ ಮಹೇಂದ್ರ ಅವರಿಗೆ ಬೆದರಿಕೆ ಒಡ್ಡಲಾಗಿತ್ತು.