ದಲಿತರ ಪ್ರತಿಭಟನೆ: ಹಿಂಸಾಚಾರ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
ಮುಝಾಫರ್ನಗರ, ಮೇ 19: ಎಪ್ರಿಲ್ 2ರಂದು ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರ ಪ್ರಕರಣದಲ್ಲಿ 34 ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಳ್ಳಿಹಾಕಿದೆ. ಇವರಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕಮಲ್ ಗೌತಮ್ ಹಾಗೂ ಭೀಮ್ ಸೇನೆಯ ಜಿಲ್ಲಾಧ್ಯಕ್ಷ ಉಪ್ಕಾರ್ ಬಾವ್ರ ಸೇರಿದ್ದಾರೆ. ಇಲ್ಲಿ ಜಾಮೀನು ಲಭ್ಯವಿರುವ ಪ್ರಕರಣ ಇಲ್ಲ ಎಂದು ತಿಳಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌರವ್ ಶ್ರೀವಾಸ್ತವ ಜಾಮೀನು ಅರ್ಜಿಯನ್ನು ತಳ್ಳಿಹಾಕಿದರು.
ಬಿಎಸ್ಪಿ ಮುಖಂಡ ಗೌತಮ್ನನ್ನು ಎಪ್ರಿಲ್ 5ರಂದು ಬಂಧಿಸಲಾಗಿದ್ದರೆ ಬಾವ್ರ ಎಪ್ರಿಲ್ 13ರಂದು ಮುಝಾಫರ್ನಗರದ ನ್ಯಾಯಾಲಯದಲ್ಲಿ ಶರಣಾಗಿದ್ದ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಾವ್ರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ 34 ಆರೋಪಿಗಳ ವಿರುದ್ಧ ಹಿಂಸಾಚಾರ ಮತ್ತು ದೊಂಬಿ ನಡೆಸಿದ್ದ ಆರೋಪದಡಿ ಪೊಲೀಸರು ಹಲವಾರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸರಕಾರದ ವಕೀಲ ಜಿತೇಂದರ್ ತ್ಯಾಗಿ ನ್ಯಾಯಾಲಯಕ್ಕೆ ತಿಳಿಸಿದರು.