ಕಥುವಾ ಪ್ರಕರಣ: ಪರೀಕ್ಷಾ ದಾಖಲಾತಿಯಲ್ಲಿರುವ ಸಹಿಗೂ ಆರೋಪಿಯ ಸಹಿಗೂ ತಾಳೆಯಾಗುತ್ತಿಲ್ಲ; ಫೊರೆನ್ಸಿಕ್ ವರದಿ
ಘಟನೆ ನಡೆದಾಗ ತಾನು ಸ್ಥಳದಲ್ಲಿರಲಿಲ್ಲ ಎಂಬ ಆರೋಪಿಯ ವಾದಕ್ಕೆ ಹಿನ್ನಡೆ
ಶ್ರೀನಗರ, ಮೇ 20: ಪರೀಕ್ಷಾ ದಾಖಲಾತಿಯಲ್ಲಿರುವ ಸಹಿಗೂ ಕಥುವಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ವಿಶಾಲ್ ಜಂಗೋತ್ರಾನ ಸಹಿಗೂ ತಾಳೆಯಾಗುತ್ತಿಲ್ಲ ಎಂದು ಫೋರೆನ್ಸಿಕ್ ತಜ್ಞರ ವರದಿ ತಿಳಿಸಿದೆ. ತಾನು ಅಪರಾಧ ನಡೆದ ಸ್ಥಳದಲ್ಲಿರಲಿಲ್ಲ. ತಾನು ಮೀರತ್ ನಲ್ಲಿದ್ದೆ ಎನ್ನುವುದಕ್ಕೆ ಪರೀಕ್ಷಾ ದಾಖಲಾತಿಯಲ್ಲಿರುವ ಸಹಿ ಸಾಕ್ಷಿ ಎಂದು ಆತ ಈ ಹಿಂದೆ ಹೇಳಿದ್ದ,
ಸೆಂಟ್ರಲ್ ಫೊರೆನ್ಸಿಕ್ ಸೈನ್ಸಸ್ ಲ್ಯಾಬೊರೇಟರಿ ಈ ಬಗೆಗಿನ ವರದಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಕ್ರೈಂ ಬ್ರಾಂಚ್ ಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ನಾಳೆ ಹಾಜರಾಗಬೇಕೆಂದು ಕ್ರೈಂ ಬ್ರಾಂಚ್ ವಿಶಾಲ್ ನ ಮೂವರು ಸ್ನೇಹಿತರಿಗೆ ಈಗಾಗಲೇ ಸೂಚನೆ ನೀಡಿದೆ.
ಪರೀಕ್ಷಾ ದಾಖಲಾತಿ ಶೀಟ್ ನಲ್ಲಿ ವಿಶಾಲ್ ಸಹಿ ಹಾಕಿರಲಿಲ್ಲ. ಆತನ ಬದಲಿಗೆ ಬೇರೆ ಯಾರೋ ಸಹಿ ಹಾಕಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ 8 ಆರೋಪಿಗಳಲ್ಲಿ ಒಬ್ಬನಾದ ವಿಶಾಲ್, ಘಟನೆ ನಡೆದಾಗ ನಾನು ಮೀರತ್ ನಲ್ಲಿದ್ದೆ. ನಾನು ಆಗ ಸ್ಥಳದಲ್ಲಿ ಇರಲಿಲ್ಲ ಎಂದಿದ್ದ. ಜನವರಿ 15ರಂದು ಪರೀಕ್ಷೆಗೂ ಮುನ್ನ ತಾನು ದಾಖಲಾತಿ ಶೀಟ್ ಗೆ ಸಹಿ ಹಾಕಿದ್ದೆ ಎಂದು ಆತ ತಿಳಿಸಿದ್ದ,