ಬಿಸಿಯೂಟ ಸರಿಯಿಲ್ಲ ಎಂದ ವಿದ್ಯಾರ್ಥಿಗೆ ಕಬ್ಬಿಣದ ರಾಡ್ ನಿಂದ ಥಳಿಸಿದ ಪ್ರಾಂಶುಪಾಲ
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್, ಮೇ 22: ಶಾಲೆಯಲ್ಲಿ ಒದಗಿಸಲಾದ ಮಧ್ಯಾಹ್ನದ ಬಿಸಿಯೂಟದ ಕಳಪೆ ಗುಣಮಟ್ಟದ ಬಗ್ಗೆ ದೂರು ನೀಡಿದ 5ನೇ ತರಗತಿಯ ವಿದ್ಯಾರ್ಥಿಗೆ ಶಾಲೆಯ ಪ್ರಾಂಶುಪಾಲರು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಹ್ರಾಡೂನ್ನ ಓಲ್ಡ್ ದಲಾನ್ವಾಲ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯಲ್ಲಿ ಒದಗಿಸಲಾದ ಮಧ್ಯಾಹ್ನದ ಊಟದ ಬಗ್ಗೆ ರಾಹುಲ್ ಎಂಬ 11ರ ಹರೆಯದ ವಿದ್ಯಾರ್ಥಿ ಪ್ರಾಂಶುಪಾಲರಿಗೆ ದೂರು ನೀಡಿದಾಗ ಸಿಟ್ಟಾದ ಪ್ರಾಂಶುಪಾಲೆ ನಸ್ರೀನ್ ಬಾನೊ ಬಾಲಕನ ಮೇಲೆ ಕಬ್ಬಿಣದ ರಾಡ್ನಿಂದ ಥಳಿಸಿದ್ದು ಆತ ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಆತನನ್ನು ಸ್ನೇಹಿತರು ಮನೆಗೆ ತಲುಪಿಸಿದ್ದಾರೆ. ಬಳಿಕ ಬಾಲಕನ ತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿ ಬಾಲಕನ ಸಂಬಂಧಿಕರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರಾಥಮಿಕ ತನಿಖೆಯ ಬಳಿಕ ಪ್ರಾಂಶುಪಾಲೆಯನ್ನು ಅಮಾನತುಗೊಳಿಸಲಾಗಿದೆ ಎಂದು ಡೆಹ್ರಾಡೂನ್ನ ಮುಖ್ಯ ಶಿಕ್ಷಣಾಧಿಕಾರಿ ಎಸ್.ಬಿ.ಜೋಷಿ ತಿಳಿಸಿದ್ದಾರೆ.