ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳದ್ದಕ್ಕಾಗಿ ತಮಿಳರನ್ನು ಕೊಲ್ಲಲಾಗುತ್ತಿದೆ: ರಾಹುಲ್ ಆರೋಪ
ಚೆನ್ನೈ,ಮೇ 23: ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ತಮಿಳರನ್ನು ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ಮಂಗಳವಾರ ತೂತುಕುಡಿಯಲ್ಲಿ ಸ್ಟರ್ಲೈಟ್ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಹಿಂಸಾಚಾರವು ಬುಧವಾರವೂ ಮುಂದುವರಿದಿದ್ದು, ಪೊಲೀಸರ ಗೋಲಿಬಾರ್ನಿಂದ ಇನ್ನೋರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ‘‘ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದಕ್ಕಾಗಿ ತಮಿಳರನ್ನು ಕೊಲ್ಲಲಾಗುತ್ತಿದೆ. ಆರೆಸ್ಸೆಸ್ ಮತ್ತು ಮೋದಿಯವರ ಗುಂಡುಗಳು ತಮಿಳರ ಭಾವನೆಗಳನ್ನು ದಮನಿಸಲು ಎಂದಿಗೂ ಸಾಧ್ಯವಿಲ್ಲ. ತಮಿಳು ಸೋದರ ಸೋದರಿಯರೇ,ನಾವು ನಿಮ್ಮೊಂದಿಗಿದ್ದೇವೆ’’ ಎಂದು ರಾಹುಲ್ ತಮಿಳಿನಲ್ಲಿ ಟ್ವೀಟಿಸಿದ್ದಾರೆ.
ಜನರನ್ನು ಗುಂಡಿಟ್ಟು ಕೊಲ್ಲುತ್ತಿರುವುದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯ ಕ್ರೂರ ನಿದರ್ಶನವಾಗಿದೆ. ಅನ್ಯಾಯದ ವಿರುದ್ಧ ಪ್ರತಿಭಟನೆಗಾಗಿ ಈ ಜನರನ್ನು ಕೊಲ್ಲಲಾಗುತ್ತಿದೆ ಎಂದು ಅವರು ಮಂಗಳವಾರ ಟ್ವೀಟಿಸಿದ್ದರು.