ಪ್ರಧಾನಿ ಮೋದಿ, ರಾಷ್ಟ್ರಗೀತೆಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ವಿಫಲನಾದ ಯುವಕನಿಗೆ ಥಳಿತ
ಮಾಲ್ಡ, ಮೇ 26: ಪ್ರಧಾನಿ ಹಾಗೂ ರಾಷ್ಟ್ರಗೀತೆಯ ಬಗ್ಗೆ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲನಾದ ಯುವಕನೊಬ್ಬನಿಗೆ ನಾಲ್ಕು ಮಂದಿಯ ತಂಡವೊಂದು ಚಲಿಸುತ್ತಿರುವ ರೈಲೊಂದರಲ್ಲಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಸಂತ್ರಸ್ತ ಕಾರ್ಮಿಕನಾಗಿದ್ದು, ಹೌರಾ ನಗರದಿಂದ ಮಾಲ್ಡಾ ಜಿಲ್ಲೆಯ ಕಾಲಿಯಾಚಕ್ ಎಂಬಲ್ಲಿಗೆ ಆತ ಪ್ರಯಾಣಿಸುತ್ತಿದ್ದ. ರೈಲ್ವೆ ನಿಲ್ದಾಣವೊಂದರಲ್ಲಿ ಆತ ಸ್ವಲ್ಪ ಹೊತ್ತು ಇಳಿದು ಮತ್ತೆ ರೈಲು ಹತ್ತುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ್ದ ನಾಲ್ಕು ಮಂದಿ ಆತನ ಪಕ್ಕದ ಸೀಟಿನಲ್ಲಿ ಆಸೀನರಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಷ್ಟ್ರಗೀತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದರು. ಆದರೆ ಆತ ಉತ್ತರಿಸಲು ವಿಫಲವಾದಾಗ ಆತನ ಮೇಲೆ ಹಲ್ಲೆ ನಡೆಸಿ ನಂತರ ಬಂಡೇಲ್ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದರು.
ಕೆಲ ಸಹಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ಈ ಘಟನೆಯ ವೀಡಿಯೋದ ಆಧಾರದಲ್ಲಿ ಸ್ಥಳೀಯ ಎನ್ಜಿಒ ಬಾಂಗ್ಲಾ ಸಂಕೃತಿ ಮಂಚ ಪೊಲೀಸ್ ದೂರು ದಾಖಲಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.