ಕೋಲ್ಕತ್ತಾದಲ್ಲಿ ಅನಾರೋಗ್ಯದಿಂದ ಯೋಧ ಮೃತ್ಯು: ನಿಪಾಹ್ ಶಂಕೆ
ಕೋಲ್ಕತಾ, ಮೇ 30: ಕೋಲ್ಕತಾದಲ್ಲಿ ಕೇರಳ ಮೂಲದ ಯೋಧರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಇವರ ಸಾವಿಗೆ ನಿಪಾಹ್ ವೈರಸ್ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಈ ಮಾರಣಾಂತಿಕ ರೋಗಕ್ಕೆ ಕೇರಳದಲ್ಲಿ ಇದುವರೆಗೆ 13 ಮಂದಿ ಬಲಿಯಾಗಿದ್ದಾರೆ.
27ರ ಹರೆಯದ ಸೀನು ಪ್ರಸಾದ್ ಮೃತಪಟ್ಟ ಯೋಧ. ಇವರನ್ನು ಫೋರ್ಟ್ ವಿಲಿಯಮ್ಸ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಒಂದು ತಿಂಗಳು ರಜೆ ಪಡೆದು ಕೇರಳದಲ್ಲಿರುವ ಮನೆಗೆ ತೆರಳಿದ್ದ ಪ್ರಸಾದ್ ಮೇ 13ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ತೀವ್ರ ಅನಾರೋಗ್ಯ ಕಾಡಿದ್ದ ಹಿನ್ನೆಲೆಯಲ್ಲಿ ಮೇ 20ರಂದು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳ ಬಳಿಕ ಪ್ರಸಾದ್ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಯೋಧನ ರಕ್ತದ ಸ್ಯಾಂಪಲ್ ಅನ್ನು ಪುಣೆಯಲ್ಲಿರುವ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ’ಗೆ ಕಳುಹಿಸಲಾಗಿದೆ. ಸಾವಿಗೆ ನಿಪಾಹ್ ವೈರಸ್ ಕಾರಣವೇ ಎಂಬುದು ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ವಕ್ತಾರರು ಹೇಳಿದ್ದಾರೆ.
Next Story