ಭಾರತ ಎದುರಿಸುತ್ತಿರುವ ಭದ್ರತಾ ಸವಾಲುಗಳಲ್ಲಿ ಸೈಬರ್ ದಾಳಿ ಪ್ರಮುಖ: ಗೃಹ ಕಾರ್ಯದರ್ಶಿ
ಹೊಸದಿಲ್ಲಿ, ಮೇ 31: ಭಾರತ ಎದುರಿಸುತ್ತಿರುವ ಪ್ರಮುಖ ಭದ್ರತಾ ಸವಾಲುಗಳಲ್ಲಿ ಸೈಬರ್ ದಾಳಿ ಕೂಡಾ ಒಂದಾಗಿದೆ. ಇವುಗಳು ಭಾರತದ ಬಹುಮುಖ್ಯ ಯೋಜನೆಗಳು ಮತ್ತು ಆರ್ಥಿಕ ಸಂಸ್ಥೆಗಳಿಗೆ ಅಪಾಯವನ್ನು ತಂದೊಡ್ಡಬಹುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಗುರುವಾರ ತಿಳಿಸಿದ್ದಾರೆ.
ಆಂತರಿಕ ಭದ್ರತೆಯ ಕುರಿತು ನಡೆದ ಸಮಾವೇಶದಲ್ಲಿ ಮಾತನಾಡಿದ ಗೌಬ, ಸೈಬರ್ ದಾಳಿಯ ವಿರುದ್ಧ ಹೋರಾಡಲು ಭದ್ರತಾ ಸಂಸ್ಥೆಗಳು ದಾಳಿಕೋರರಿಗಿಂತಲೂ ಮುಂದಿರುವ ಮತ್ತು ತಮ್ಮ ಸಾಮರ್ಥ್ಯ ಹಾಗೂ ತಂತ್ರಜ್ಞಾನವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಂಸ್ಥೆಗಳು ಮತ್ತು ಸರಕಾರ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು ಅದಕ್ಕಾಗಿ ಅಪಾಯದ ನಿಯಮಿತ ವೌಲ್ಯಮಾಪನ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾನ್ಯವಾಗಿ ನಾನು ಉತ್ತಮವಾಗಿ ವೌಲ್ಯಮಾಪನ ಮಾಡುತ್ತೇವೆ. ಆದರೆ ಸಿದ್ಧತೆಯ ವಿಷಯದಲ್ಲಿ ಹಾಗೆ ಹೇಳುವಂತಿಲ್ಲ. ಯಾಕೆಂದರೆ ಸಿದ್ಧತೆಗೆ ಹೂಡಿಕೆ ಮತ್ತು ಅನುಭವದ ಅಗತ್ಯವಿರುತ್ತದೆ. ನಮಗೆ ಅತ್ಯುತ್ತಮ ಕಾನೂನಾತ್ಮಕ ವೌಲ್ಯಮಾಪನ ಹಾಗೂ ಅತ್ಯುತ್ಕೃಷ್ಟ ತಾಂತ್ರಿಕ ಸಾಮರ್ಥ್ಯದ ಅಗತ್ಯವಿದೆ. ಈ ವಿಭಾಗದಲ್ಲಿ ಖಾಸಗಿ ಕ್ಷೇತ್ರ ಮತ್ತು ಸರಕಾರಿ ಸಂಸ್ಥೆಗಳು ಒಟ್ಟಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಗೌಬ ತಿಳಿಸಿದ್ದಾರೆ. ಅನುಭವ ಮತ್ತು ತಂತ್ರಜ್ಞಾನವನ್ನು ವೇಗವಾಗಿ ಸುಧಾರಣೆಗೊಳಪಡಿಸಬೇಕಿದೆ. ಈ ಒಂದು ಕ್ಷೇತ್ರದಲ್ಲಿ ಸರಕಾರಕ್ಕೆ ಸರಿಯಾದ ಕ್ರಮ ಕೈಗೊಳ್ಳುವ ಸಾಮರ್ಥ್ಯ ಅಥವಾ ಶಕ್ತಿ ಇಲ್ಲ ಎಂದು ನನ್ನ ಅಭಿಪ್ರಾಯ. ಹಾಗಾಗಿ ಕೈಗಾರಿಕೆ, ಖಾಸಗಿ ಕ್ಷೇತ್ರ ಮತ್ತು ಶೈಕ್ಷಣಿಕ ಜಗತ್ತಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಪ್ರಮುಖವೆನಿಸುತ್ತದೆ ಎಂದು ಗೌಬ ತಿಳಿಸಿದ್ದಾರೆ.