ನೀರವ್ ಮೋದಿ, ಚೊಕ್ಸಿ ಪ್ರಕರಣದ ಕಡತಗಳನ್ನು ಬೇರೆ ಕಡೆ ಸಾಗಿಸಲಾಗಿದೆ: ಐಟಿ ಇಲಾಖೆ
ಹೊಸದಿಲ್ಲಿ, ಜೂ.4: ವಜ್ರೋದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೊಕ್ಸಿ ಆರೋಪಿಗಳೆಂದು ಗುರುತಿಸಲಾಗಿರುವ ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಸುರಕ್ಷಿತವಾಗಿವೆ ಹಾಗೂ ಮುಂಬೈಯ ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸುವ ಮೊದಲೇ ಅವುಗಳನ್ನು ಅಲ್ಲಿಂದ ಬೇರೆ ಕಡೆ ಸಾಗಿಸಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಕಿಯಲ್ಲಿ ನಾಶವಾಗಿವೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.
ಆದಾಯ ತೆರಿಗೆ ಕಚೇರಿ ಇರುವ ಸಿಂಧಿಯಾ ಹೌಸ್ ಕಟ್ಟಡದಲ್ಲಿನ ಬೆಂಕಿಯಲ್ಲಿ ದಾಖಲೆಗಳು ನಾಶವಾಗಿವೆ ಎಂಬ ವರದಿಗಳು ಸಂಪೂರ್ಣ ಸುಳ್ಳು ಹಾಗೂ ತಪ್ಪು ದಾರಿಗೆಳೆಯುವಂತಹದ್ದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗಾಗಿ ವಿವಿಧ ಕಟ್ಟಡಗಳಲ್ಲಿರುವ ಸಂಬಂಧಿತ ಕಚೇರಿಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಅವುಗಳು ನಾಶವಾಗಿವೆ ಎಂಬ ಭಯ ಅನಗತ್ಯ ಎಂದೂ ಹೇಳಿಕೆ ತಿಳಿಸಿದೆ.
Next Story