ಆರೆಸ್ಸೆಸ್ ಗೆ ಸಹಿಷ್ಣುತೆಯ ಪಾಠ ಹೇಳಿದ ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿಯ ಭಾಷಣದ ಹೈಲೈಟ್ಸ್
ನಾಗ್ಪುರ, ಜೂ.7: ಭಾರತದ ಆತ್ಮವು ಸಹಿಷ್ಣುತೆ ಹಾಗು ಬಹುಸಾಂಸ್ಕೃತಿಕತೆಗಳಲ್ಲಿದ್ದು, ಜಾತ್ಯಾತೀತವಾದವು ನಮಗೆ ನಂಬಿಕೆಯ ವಿಷಯವಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ಆರೆಸ್ಸೆಸ್ ನ ಶಿಕ್ಷಾ ವರ್ಗದಲ್ಲಿ ಗುರುವಾರ ಬಹುನಿರೀಕ್ಷಿತ ಭಾಷಣ ಮಾಡಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ನಮ್ಮ ರಾಷ್ಟ್ರವನ್ನು ಧರ್ಮ, ಪ್ರದೇಶ, ದ್ವೇಷ ಹಾಗೂ ಅಸಹಿಷ್ಣುತೆ ಅಡಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನ ದೇಶವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.
‘‘ನಮ್ಮ ರಾಷ್ಟ್ರತ್ವವನ್ನು ಸಿದ್ಧಾಂತ ಹಾಗೂ ಅನನ್ಯತೆ ಅಥವಾ ಧರ್ಮ, ಪ್ರದೇಶ, ದ್ವೇಷ ಹಾಗೂ ಅಸಹಿಷ್ಣುತೆ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನ ನಮ್ಮ ಅನನ್ಯತೆ ದುರ್ಬಲವಾಗಲು ಕಾರಣವಾಗಬಹುದು. ನಾವು ನಮ್ಮ ವೈವಿಧ್ಯತೆಗೆ ಗೌರವ ನೀಡಬೇಕು’’ ಎಂದು ಮುಖರ್ಜಿ ಹೇಳಿದರು.
‘‘ಭಾರತದ ಆತ್ಮ ಬಹುತ್ವ ಹಾಗೂ ಸಹಿಷ್ಣುತೆಯಲ್ಲಿ ನೆಲೆಸಿದೆ. ಈ ಬಹುತ್ವ ಶತಮಾನಗಳ ಚಿಂತನೆಯ ಸಮೀಕರಣದಿಂದ ಬಂದಿದೆ.’’ ಎಂದು ಅವರು ಹೇಳಿದರು.
‘‘ನಮ್ಮ ರಾಷ್ಟ್ರದ ಅನನ್ಯತೆ ದೀರ್ಘಕಾಲದ ಸಂಗಮ ಹಾಗೂ ಸಮೀಕರಣದ ಬಳಿಕ ರೂಪುಗೊಂಡಿತು. ಹಲವು ಸಂಸ್ಕೃತಿ ಹಾಗೂ ನಂಬಿಕೆಗಳು ನಮ್ಮನ್ನು ವಿಶೇಷ ಸಹಿಷ್ಣುವಾಗಿ ಮಾಡಿದವು. ಜಾತ್ಯತೀತತೆ ನಮ್ಮ ನಂಬಿಕೆಯ ವಿಷಯವಾಗಿದೆ’’ ಎಂದು ಅವರು ಭಾರತದ ಸಮಾಜದಲ್ಲಿ ಅಂತರ್ಗತವಾಗಿರುವ ಬಹುತ್ವವನ್ನು ವಿವರಿಸಿ, ‘‘ಭಾರತದ ರಾಷ್ಟ್ರತ್ವ ಒಂದು ಭಾಷೆ, ಒಂದು ಪ್ರದೇಶ, ಒಂದು ಧರ್ಮ ಅಲ್ಲ’’ ಎಂದರು. ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸುವ ಮೂಲಕ ತನ್ನ ರಾಷ್ಟ್ರೀಯವಾದದ ಚಿಂತನೆಯನ್ನು ಇನ್ನಷ್ಟು ಸ್ಪಷ್ಟಪಡಿಸಿದ ಮುಖರ್ಜಿ, ‘‘ಭಾರತದ ರಾಷ್ಟ್ರೀಯತೆ ‘ಹೊರತುಪಡಿಸಿದ’, ಆಕ್ರಮಣಕಾರಿ ಅಥವಾ ವಿಧ್ವಂಸಕ ಅಲ್ಲ ಎಂದು ಗಾಂಧೀಜಿ ವಿವರಿಸಿದ್ದರು’’ ಎಂದರು.
ಭಾರತದ ಸಂದರ್ಭದಲ್ಲಿ ಜಾತ್ಯತೀತವಾದದ ಪ್ರಾಮಖ್ಯತೆಯ ಬಗ್ಗೆ ಭಾರತದ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ಬರೆದ ಲೇಖನದ ಭಾಗವನ್ನು ಮುಖರ್ಜಿ ಉಲ್ಲೇಖಿಸಿದರು. ‘‘ಪಂಡಿತ್ ನೆಹರೂ ಅವರು ರಾಷ್ಟ್ರೀಯತೆ ಬಗ್ಗೆ ತನ್ನ ಪುಸ್ತಕವಾದ 'ಡಿಸ್ಕವರಿ ಆಫ್ ಇಂಡಿಯಾ'ದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಭಾರತದ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಇತರ ಗುಂಪುಗಳ ಸೈದ್ಧಾಂತಿಕ ಸಮ್ಮಿಲನದಿಂದ ಮಾತ್ರ ರಾಷ್ಟ್ರೀಯತೆ ಉದ್ಭವಿಸಲು ಸಾಧ್ಯ ಎಂದು ನಾನು ಅರ್ಥ ಮಾಡಿಕೊಂಡೆ ಎಂದು ನೆಹರೂ ಇದರಲ್ಲಿ ಹೇಳಿದ್ದಾರೆ” ಎಂದು ಪ್ರಣವ್ ಮುಖರ್ಜಿ ತಿಳಿಸಿದರು.
ನಮ್ಮ ಸಂವಿಧಾನವು ದೇಶದಲ್ಲಿರುವ ಕೋಟ್ಯಾಂತರ ಜನರ ನಂಬಿಕೆ ಹಾಗು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಬಹುಸಂಸ್ಕೃತಿ ಮತ್ತು ನಂಬಿಕೆಗಳು ನಮ್ಮ ಸಹಿಷ್ಣುವಾಗಿ ಮಾಡಿದೆ. ದ್ವೇಷ ಹಾಗು ಅಸಹಿಷ್ಣುತೆ ನಮ್ಮ ದೇಶದ ಗುರುತಿಗೆ ಹಾನಿಯೆಸಗುತ್ತದೆ. ನಾವು ಸಹಿಷ್ಣುತೆಯಿಂದ ಶಕ್ತಿಯನ್ನು ಪಡೆಯುತ್ತೇವೆ, ನಾವು ನಮ್ಮ ಬಹುಸಾಂಸ್ಕೃತಿಕತೆಯನ್ನು ಗೌರವಿಸುತ್ತೇವೆ. ನಾವು ನಮ್ಮ ವೈವಿಧ್ಯತೆಯನ್ನು ಆನಂದಿಸುತ್ತೇವೆ” ಎಂದವರು ಹೇಳಿದರು,