ಅಂಬೇಡ್ಕರ್ ಅನುಯಾಯಿಗಳನ್ನು ನಕ್ಸಲರೆಂದು ತಿಳಿಯಬಾರದು: ಕೇಂದ್ರ ಸಚಿವ ಅಠಾವಳೆ
ಮುಂಬೈ, ಜೂ.8: ಭೀಮಾ ಕೋರೆಗಾಂವ್ ಹಿಂಸಾಚಾರದ ಸಂಬಂಧ ಪುಣೆ ಪೊಲೀಸರಿಂದ ಬಂಧಿತರಾದ ಐದು ಮಂದಿ ಅಂಬೇಡ್ಕರ್ ಅವರ ಅನುಯಾಯಿಗಳೆಂದಾದರೆ ಅವರನ್ನು ನಕ್ಸಲರೆಂದು ಪರಿಗಣಿಸಬಾರದೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಶುಕ್ರವಾರ ಹೇಳಿದ್ದಾರೆ.
"ಬಂಧಿತರಿಗೆ ನಕ್ಸಲ್ ಚಳುವಳಿಯ ಜತೆ ನಂಟು ಇಲ್ಲವೆಂದಾದರೆ ನಾನು ಅವರಿಗೆ ಸಹಾಯ ಮಾಡುತ್ತೇನೆ'' ಎಂದೂ ಸಚಿವರು ತಿಳಿಸಿದ್ದಾರೆ. ಯಲ್ಗರ್ ಪರಿಷದ್ ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜತೆ ಮಾತನಾಡುವುದಾಗಿಯೂ ಅವರು ಹೇಳಿದರು. "ಅಂಬೇಡ್ಕರ್ ಅವರ ಯುವ ಅನುಯಾಯಿಗಳು ನಕ್ಸಲರ ಚಳುವಳಿ ಜತೆ ಯಾವುದೇ ಸಂಬಂಧ ಹೊಂದಬಾರದು'' ಎಂದು ಅವರು ಕೇಳಿಕೊಂಡರು.
ಬಂಧಿತ ಐದು ಮಂದಿಯಾದ ಸುರೇಂದ್ರ ಗದ್ಲಿಂಗ್, ಸುಧೀರ್ ಧವಳೆ, ರೋನಾ ಜೇಕಬ್ ವಿಲ್ಸನ್, ಶೋಮಾ ಸೇನ್ ಹಾಗೂ ಮಹೇಶ್ ರಾವತ್ ಅವರಿಗೆ ನಕ್ಸಲರ ಜತೆ ನಂಟಿದೆ ಎಂದು ನಗರದ ಜಂಟಿ ಪೊಲೀಸ್ ಆಯುಕ್ತರು ಆರೋಪಿಸಿದ್ದರು. ಎಲ್ಲಾ ಐದು ಮಂದಿಗೂ ಪುಣೆ ನ್ಯಾಯಾಲಯ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.