ನಿಪಾಹ್ ವೈರಸ್ ನಿಯಂತ್ರಿಸಲಾಗಿದೆ, ಹೆದರುವ ಅಗತ್ಯವಿಲ್ಲ: ಆರೋಗ್ಯ ಸಚಿವಾಲಯ
ಕೊಲ್ಕತ್ತಾ, ಜೂನ್9: ನಿಪಾಹ್ ವೈರಸನ್ನು ನಿಯಂತ್ರಿಸಲಾಗಿದೆ. ಹಾಗಾಗಿ ಅದರಿಂದಾಗಿ ಅತೀಹೆಚ್ಚು ಸಾವುಗಳು ಸಂಭವಿಸಿರುವ ಕೇರಳ ರಾಜ್ಯದಿಂದ ಓಡಿಹೋಗುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ರಾಜ್ಯ ಸಚಿವ ಅಶ್ವಿನಿ ಚೌಬೆ ಶನಿವಾರ ತಿಳಿಸಿದ್ದಾರೆ.
ಕೇರಳದಲ್ಲಿ ನಿಪಾಹ್ ವೈರಸ್ನಿಂದ ಹದಿನೇಳು ಮಂದಿ ಸಾವನ್ನಪ್ಪಿದ್ದರೂ ಸದ್ಯ ಹೊಸದಾಗಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಕೇರಳ ಹೊರತುಪಡಿಸಿ ದೇಶದ ಇತರ ಯಾವ ಕಡೆಯಿಂದಲೂ ನಿಪಾಹ್ ವೈರಸ್ನಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿಗಳು ಬಂದಿಲ್ಲ. ಇದು ಒಳ್ಳೆಯ ಸಂಕೇತ. ನಿಪಾಹ್ ಸಾಂಕ್ರಾಮಿಕವಲ್ಲ. ಹಾಗಾಗಿ ಯಾರೂ ಹೆದರುವ ಅಗತ್ಯವಿಲ್ಲ ಎಂದು ಚೌಬೆ ತಿಳಿಸಿದ್ದಾರೆ. ಶನಿವಾರದಂದು ಆರೋಗ್ಯ ಸಂಸ್ಥೆಗಳ ಜೊತೆ ಮತ್ತು ರಾಜ್ಯ ಸಚಿವರುಗಳ ಜೊತೆ ಸಮಾಲೋಚನೆಗಾಗಿ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ನಿಪಾಹ್ ವೈರಸ್ ಭಯದಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪಶ್ಚಿಮ ಬಂಗಾಳಕ್ಕೆ ಮರಳುತ್ತಿರುವ ವರದಿಗಳನ್ನು ಉಲ್ಲೇಖಿಸಿ ಮಾತನಾಡಿದ ಚೌಬೆ, ನಮ್ಮ ಇಡೀ ತಂಡ ಕೇರಳದಲ್ಲಿ ನಿಪಾಹ್ ಅತಿಯಾಗಿ ಹರಡಿದ್ದ ಪ್ರದೇಶದಲ್ಲಿ ಕಾರ್ಯಪ್ರವೃತ್ತರಾಗಿ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ. ಹಾಗಾಗಿ ಕೇರಳದಿಂದ ಓಡಿಹೋಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ನಿಪಾಹ್ ವೈರಸ್ಗೆ ತುತ್ತಾಗಿ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಸ್ಥರು ಆಸ್ಪತ್ರೆಗಳ ಪ್ರತ್ಯೇಕ ಕೊಠಡಿಗಳಲ್ಲಿ ಚಿಕಿತ್ಸೆಗೊಳಪಡಿಸಲಾಗುತ್ತಿದ್ದು ಅವರೆಲ್ಲರೂ ಅಪಾಯದಿಂದ ಮುಕ್ತರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.