ಅಂಬೇಡ್ಕರ್ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದ ಬಿಜೆಪಿ ಸಂಸದ
ಭೀಮಾ-ಕೋರೆಗಾಂವ್ ಹಿಂಸಾಚಾರದ ಹಿಂದೆ ನಕ್ಸಲ್ ಆರೋಪ
ಹೊಸದಿಲ್ಲಿ, ಜೂ. 10: ಭೀಮಾ-ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ನಕ್ಸಲೀಯರಿದ್ದರು ಎಂಬ ಪ್ರತಿಪಾದನೆಯನ್ನು ಪ್ರಶ್ನಿಸಿರುವ ಬಿಜೆಪಿ ಸಂಸದ ಹಾಗೂ ದಲಿತ ನಾಯಕ ಉದಿತ್ ರಾಜ್, ಇದರಿಂದ ಅಲ್ಲಿ ಸೇರಿದ್ದ ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಅವಮಾನ ಆಗಿದೆ ಎಂದಿದ್ದಾರೆ.
ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಮಾವೋವಾದಿಗಳ ಸಂಪರ್ಕದ ಆರೋಪದಲ್ಲಿ ಪೊಲೀಸರು ಐವರನ್ನು ಬಂಧಿಸಿದ ದಿನದ ಬಳಿಕ ಉದಿತ್ ರಾಜ್, ನಕ್ಸಲೀಯರಿಗೆ ಲಕ್ಷದಷ್ಟು ದಲಿತರನ್ನು ಸಂಘಟಿಸಲು ಸಾಧ್ಯವಿದೆ ಎಂಬುದು ನನಗೆ ಅಚ್ಚರಿ ಉಂಟು ಮಾಡಿದೆ ಎಂದಿದ್ದಾರೆ. 2014ರಲ್ಲಿ ಅತೀವ ನಿರೀಕ್ಷೆಯೊಂದಿಗೆ ಬಿಜೆಪಿಗೆ ಮತ ಹಾಕಿದ ಸಮುದಾಯ ಈಗ ಹತಾಶೆ ಹಾಗೂ ಕ್ರೋಧಗೊಂಡಿದೆ ಎಂದು ಹೇಳಿದ ಅವರು, ಈ ಹಿಂದಿನ ಕಾರಣವನ್ನು ಪಕ್ಷ ವಿಶ್ಲೇಷಿಸಬೇಕು. ಹಾಗೂ 2019ರ ಲೋಕಸಭೆ ಚುನಾವಣೆಯ ಮುನ್ನ ಬದಲಾವಣೆ ತರಬೇಕು ಎಂದಿದ್ದಾರೆ. ತಾನು ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇನೆ ಹಾಗೂ ಅವರೊಂದಿಗೆ ದಲಿತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಸಲಹೆ ನೀಡಿದ್ದೇನೆ ಎಂದು ಉದಿತ್ ರಾಜ್ ಹೇಳಿದರು.