ಹಸುಳೆಯ ಹಣೆಗೆ ಕಾದ ಕಬ್ಬಿಣದ ಸೂಜಿ ಇಟ್ಟ ರಾಜಸ್ಥಾನದ ದಂಪತಿ!
ಜೈಪುರ, ಜೂ.15: ಹತ್ತು ತಿಂಗಳ ಗಂಡು ಮಗುವಿಗೆ ಕಾಯಿಲೆ ವಾಸಿಯಾಗಲಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನ ದಂಪತಿ ಕಾದ ಕಬ್ಬಿಣದ ಸೂಜಿಯನ್ನು ಮಗುವಿನ ಹಣೆ ಹಾಗೂ ಕುತ್ತಿಗೆಗೆ ಇಟ್ಟು ಮೂರ್ಖತನ ಪ್ರದರ್ಶಿಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಮೂಢನಂಬಿಕೆಗೆ ಬಲಿಯಾದ ಮಗುವಿನ ಹೆತ್ತವರು ಇಂತಹ ಕೃತ್ಯ ನಡೆಸಿದ್ದಾರೆ. ಗಾಯಗೊಂಡಿರುವ ಮಗುವಿಗೆ ಉದಯಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ತೇಜ್ಪುರ ಗ್ರಾಮದ ನಂದಲಾಲ್ ಎಂಬಾತನ 10 ತಿಂಗಳ ಮಗು ದೆವ್ಲಾ ಕಳೆದ 10 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಸ್ಥಳೀಯವಾಗಿ ಹಲವು ಕಡೆ ಚಿಕಿತ್ಸೆ ನೀಡಿದರೂ ಕಾಯಿಲೆ ವಾಸಿಯಾಗಿರಲಿಲ್ಲ. ಅಂತಿಮವಾಗಿ ಮೂಢನಂಬಿಕೆಗೆ ಬಲಿಯಾದ ದಂಪತಿ ಕಬ್ಬಿಣ ಸೂಜಿಯನ್ನು ಬೆಂಕಿಯಲ್ಲಿ ಕಾಯಿಸಿ ಮಗುವಿನ ಹಣೆ ಹಾಗೂ ಕುತ್ತಿಗೆಯ ಹಿಂಭಾಗಕ್ಕೆ ಇಟ್ಟು ಸುಟ್ಟಿದ್ದಾರೆ. ಮಗು ನೋವು ತಾಳಲಾರದೆ ಚೀರಾಡಿದ್ದು ಬಿಸಿಯಾದ ಸೂಜಿ ತಾಗಿ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
‘‘ರಾಜಸ್ಥಾನ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ, ಬುಡಕಟ್ಟು ಪ್ರದೇಶಗಳಲ್ಲಿ ತೀವ್ರವಾದ ಮೂಢನಂಬಿಕೆ ಈಗಲೂ ಅಸ್ತಿತ್ವದಲ್ಲಿದೆ. ಆರೋಗ್ಯ ವ್ಯವಸ್ಥೆಗಳಿಂದ ವಂಚಿತವಾಗಿರುವ ಬುಡಕಟ್ಟು ಜನಾಂಗಗಳು ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಗುತ್ತಿವೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ನಿನಾಮಾ ಹೇಳಿದ್ದಾರೆ.