ವಿಶೇಷ ಮೇಲ್ವಿಚಾರಕರ ಹುದ್ದೆಗೆ ಹರ್ಷ್ ಮಂದರ್ ರಾಜೀನಾಮೆ
ಅಲ್ಪಸಂಖ್ಯಾತರ ಗುರಿಯಾಗಿಸಿ ನಡೆದ ಎನ್ಕೌಂಟರ್ ಹತ್ಯೆಗಳ ಬಗ್ಗೆ ಮಾನವ ಹಕ್ಕು ಆಯೋಗ ಮೌನ
ಹೊಸದಿಲ್ಲಿ, ಜೂ.25: ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಎನ್ಕೌಂಟರ್ ಹತ್ಯೆಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಮೌನ ತಾಳಿರುವುದು ಮತ್ತು ರಾಜ್ಯ ರಾಷ್ಟ್ರೀಯ ನೋಂದಣಿ ಸಂಯೋಜಕರ ಕಚೇರಿ ಅಸ್ಸಾಂನಲ್ಲಿ ವಿದೇಶಿಗರೆಂದು ಘೋಷಿಸಿರುವ ಸೂಕ್ಷ್ಮ ವಿಷಯದ ಕುರಿತ ತಮ್ಮ ವರದಿಯ ಹಿನ್ನೆಲೆಯಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಶೇಷ ಮೇಲ್ವಿಚಾರಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಎನ್ಎಚ್ಆರ್ಸಿ ಮುಖ್ಯಸ್ಥರಾದ ನಿವೃತ್ತ ನ್ಯಾಯಾಧೀಶ ಎಚ್.ಎಲ್ ದತ್ತು ಅವರಿಗೆ ಬರೆದ ಪತ್ರದಲ್ಲಿ ಮಂದರ್, ತಮ್ಮನ್ನು ಯಾವ ರೀತಿ ಎನ್ಎಚ್ಆರ್ಸಿಯಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ವಿಶೇಷ ಮೇಲ್ವಿಚಾರಕನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಆಹ್ವಾನಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಮಾಜಿ ಐಎಎಸ್ ಅಧಿಕಾರಿಯಾಗಿರುವ ಮಂದರ್, ನಿರ್ವಸಿತ, ಬೀದಿಬದಿಯ ಮಕ್ಕಳು ಪರವಾಗಿ ಹೋರಾಟ ನಡೆಸುವ ಜೊತೆಗೆ ಹಸಿವು ಮತ್ತು ಸಮೂಹ ಹಿಂಸಾಚಾರದ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಷ್ಟಕರ ಪರಿಸ್ಥಿತಿ ಮತ್ತು ಪ್ರಜಾಪ್ರಭುತ್ವದಲ್ಲಿ ಎನ್ಎಚ್ಆರ್ಸಿಯ ನಿಯಮಗಳಲ್ಲಿ ನನಗಿದ್ದ ನಂಬಿಕೆಯಿಂದ ನಿಮ್ಮ ಆಹ್ವಾನವನ್ನು ಸ್ವೀಕರಿಸಿದ್ದೆ. ಮಾನವ ಹಕ್ಕುಗಳ ರಕ್ಷಕರು ಎನ್ಎಚ್ಆರ್ಸಿಯನ್ನು ಸುಭದ್ರಗೊಳಿಸುವ ಕಾರ್ಯ ಮಾಡಬೇಕು ಎಂದು ಅವರು ತಮ್ಮ ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ.
ಅಲ್ಪಸಂಖ್ಯಾತರ ಸಮಸ್ಯೆ ಹಾಗೂ ಕೋಮು ಹಿಂಸಾಚಾರ ವಿಷಯಗಳಲ್ಲಿ ತಮ್ಮ ಹಿಂದಿನ ಕಾರ್ಯಗಳನ್ನು ನೆನಪಿಸಿದ ಮಂದರ್, ಈ ಹಿಂದೆ 2002ರ ಗುಜರಾತ್ ಹತ್ಯಾಕಾಂಡ ಹಾಗೂ ಮಾನಸಿಕ ಆಸ್ಪತ್ರೆಗಳು, ಜೀತ ಪದ್ಧತಿ, ಆಹಾರದ ಹಕ್ಕು ಹಾಗೂ ಇತರ ಅನೇಕ ವಿಷಯಗಳಲ್ಲಿ ನಾನು ಎನ್ಎಚ್ಆರ್ಸಿ ಜೊತೆ ಸಹಮತ ಹೊಂದಿದ್ದೆ. ಹಾಗಾಗಿಯೇ ವಿಶೇಷ ಮೇಲ್ವಿಚಾರಕನಾಗಬೇಕೆಂಬ ಆಹ್ವಾನವನ್ನು ಸ್ವೀಕರಿಸಿದ್ದೆ ಎಂದು ತಿಳಿಸಿದ್ದಾರೆ.