ನಾನು ದೆಹಲಿಗೆ ಬಂದಿದ್ದು ರಕ್ಷಣಾ ಇಲಾಖೆ ಸಭೆಗೆ: ಮಾಜಿ ಪ್ರಧಾನಿ ದೇವೇಗೌಡ
ಹೊಸದಿಲ್ಲಿ, ಜೂ. 28: ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವೆ ಎಂಬ ಸುದ್ದಿ ಆಗುತ್ತಿದೆ ಆದರೆ ನಾನು ದೆಹಲಿಗೆ ಬಂದಿದ್ದು ರಕ್ಷಣಾ ಇಲಾಖೆಯ ಸಭೆಗೆ
ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ದೆಹಲಿಯ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮೂರು ಸಭೆಗೆ ಬಂದಿರಲಿಲ್ಲವಾದುದರಿಂದ ಈ ಸಭೆಗೆ ಬಂದಿದ್ದೇನೆ. ಆದರೆ ಬೇರೆ ಕಾರಣದಿಂದ ಇವತ್ತಿನ ಸಭೆ ರದ್ದಾಗಿದೆ. ಗೊಂದಲ ಆಗಬಾರದು ಎಂದು ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಹೇಳಿದರು.
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿತ್ತು. ದೇಶದಲ್ಲಿ ಎನ್ ಡಿ ಎಗೆ ಪರ್ಯಾಯ ರಂಗ ರಚನೆಯ ನಿರೀಕ್ಷೆ ಹುಟ್ಟಿಕೊಂಡಿತ್ತು. ನಿತೀಶ್ ಕುಮಾರ್ ಬಿಜೆಪಿಯಿಂದ ದೂರವಾಗುವ ಸಂದರ್ಭ ಸೃಷ್ಟಿಯಾಗಿದೆ. ಮಾಯಾವತಿ ಮತ್ತು ಅಖಿಲೇಶ್ ಯಾದವ್ ನಡುವೆ ಮಾತುಕತೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಎಡ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಜೊತೆಯಲ್ಲೇ ಇರುತ್ತೇವೆ. ರಾಜ್ಯದಲ್ಲಿ ಕೆಲವು ಗೊಂದಲಗಳಿವೆ ಅವು ಸರಿ ಆಗಲಿವೆ ಎಂದು ಹೇಳಿದ ಅವರು ಬಿಎಸ್ ಪಿ ಕೂಡ ನಮ್ಮ ಜೊತೆ ಇರಲಿದೆ ಎಂದು ಅವರು ಹೇಳಿದರು.