ಗುಂಪು ಥಳಿತಕ್ಕೊಳಗಾಗುವ ಭಯದಿಂದ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದ ಚೋಕ್ಸಿ !
ಪಿಎನ್ಬಿ ಹಗರಣ
ಹೊಸದಿಲ್ಲಿ, ಜೂ.28: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ, ವಜ್ರೋದ್ಯಮಿ ಮೆಹುಲ್ ಚೋಕ್ಸಿ ತಮ್ಮ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದುಗೊಳಿಸುವಂತೆ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಬುಧವಾರ ತಮ್ಮ ವಕೀಲರುಗಳ ಮೂಲಕ ಅಪೀಲು ಸಲ್ಲಿಸಿದ್ದಾರಲ್ಲದೆ ದೇಶದಲ್ಲಿ ಇತ್ತೀಚೆಗೆ ಗುಂಪುಗಳಿಂದ ಜನರು ಥಳಿತಕ್ಕೊಳಗಾಗುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ತಮ್ಮ ಜೀವಕ್ಕೆ ಬೆದರಿಕೆಯಿರುವುದರಿಂದ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾನೆ.
ಪಿಎನ್ಬಿ ವಂಚನೆ ಪ್ರಕರಣದಲ್ಲಿ ತನಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲದೇ ಇರುವುದಕ್ಕೆ ಹತ್ತು ಕಾರಣಗಳನ್ನು ನೀಡಿದ್ದಾನೆ.
‘‘ದೇಶದಲ್ಲಿ ಹಲವಾರು ಗುಂಪು ಥಳಿತ ಪ್ರಕರಣಗಳು ನಡೆದಿವೆ. ಒಂದು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಗುಂಪೊಂದು ಜೈಲಿನೊಳಗಡೆ ಥಳಿಸಿದೆ, ಹೀಗೆ ರಸ್ತೆಯಲ್ಲಿ ಜನರು ತಾವಾಗಿಯೇ ನ್ಯಾಯ ಪಡೆಯಲು ಯತ್ನಿಸುತ್ತಿರುವುದರಿಂದ ಆರೋಪಿ ಯಾರೆಂದು ಪತ್ತೆಯಾಗುವುದಿಲ್ಲ’’ ಎಂದು ಚೋಕ್ಸಿಯ ಅಪೀಲು ಹೇಳಿದೆ.
ತನಗೆ ವಿವಿಧ ಜನರಿಂದ ಬೆದರಿಕೆಗಳಿರುವುದರಿಂದ ತಾನೀಗ ಎಲ್ಲಿದ್ದೇನೆಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ ಚೋಕ್ಸಿಯ ಅಪೀಲು ಸದ್ಯ ತಮ್ಮ ಉದ್ಯೋಗಿಗಳಿಗೆ ವೇತನ ಮತ್ತಿತರ ಬಾಕಿ ಪಾವತಿಯಾಗಿಲ್ಲದೇ ಇರುವುದರಿಂದ, ಕೆಲ ಬಂಧಿತ ಉದ್ಯೋಗಿಗಳ ಕುಟುಂಬಗಳು ಸಂಕಷ್ಟಕ್ಕೀಡಾಗಿರುವು ದರಿಂದ, ವಿವಿಧ ವಸ್ತು ಪೂರೈಕೆ ಮಾಡಿದವರ ಬಾಕಿ ಪಾವತಿಸದೇ ಇರುವುದರಿಂದ ಹಾಗೂ ಕೆಲ ಗ್ರಾಹಕರು ತಮ್ಮ ಚಿನ್ನಾಭರಣಗಳನ್ನು ಕಳೆದುಕೊಂಡಿರುವುದರಿಂದ ಎಲ್ಲರಿಗೂ ತಮ್ಮ ವಿರುದ್ಧ ಆಕ್ರೋಶವಿದೆ ಎಂದು ಚೋಕ್ಸಿ ತಿಳಿಸಿದ್ದಾನೆ.
ತಮ್ಮ ಆರೋಗ್ಯ ಸ್ಥಿತಿ, ತಮ್ಮ ಪಾಸ್ ಪೋರ್ಟ್ ರದ್ದತಿ ಹಾಗೂ ತನಿಖಾ ಏಜನ್ಸಿಗಳ ಸ್ಥಾಪಿತ ಹಿತಾಸಕ್ತಿ ಕೂಡಾ ತಾನು ನ್ಯಾಯಾಲಯದೆದುರು ಹಾಜರಾಗುವುದನ್ನು ತಡೆದಿದೆ ಎಂದು ಚೋಕ್ಸಿ ತನ್ನ ವಕೀಲರುಗಳಾದ ಸಂಜಯ್ ಅಬ್ಬೊಟ್ ಹಾಗೂ ರಾಹುಲ್ ಅಗರ್ವಾಲ್ ಮುಖಾಂತರ ಸಲ್ಲಿಸಿರುವ ಅಪೀಲಿನಲ್ಲಿ ತಿಳಿಸಿದ್ದಾನೆ.
ನೀರವ್ ಮೋದಿ ಪ್ರಕರಣಕ್ಕಿಂತ ತನ್ನ ಪ್ರಕರಣ ಸಂಪೂರ್ಣವಾಗಿ ಭಿನ್ನವಾಗಿರುವ ಹೊರತಾಗಿಯೂ ತನ್ನ ಕಂಪನಿಗಳ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚೋಕ್ಸಿ ದೂರಿದ್ದಾನೆ.