ನೀರವ್ ಮೋದಿ ಹಗರಣದಲ್ಲಿ 54 ಅಧಿಕಾರಿಗಳು ತಪ್ಪಿತಸ್ತರು: ಪಿಎನ್ಬಿಯ ಆಂತರಿಕ ತನಿಖಾ ವರದಿ
ಹೊಸದಿಲ್ಲಿ, ಜೂ.28: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ನಲ್ಲಿ ಬೆಳಕಿಗೆ ಬಂದ 14,000 ಕೋಟಿ ರೂ. ಮೊತ್ತದ ಹಗರಣದ ಬಗ್ಗೆ ಸಲ್ಲಿಸಲಾದ ಆಂತರಿಕ ತನಿಖಾ ವರದಿಯಲ್ಲಿ ಬ್ಯಾಂಕಿನ ಆಡಳಿತ , ಪ್ರಾದೇಶಿಕ ಮತ್ತು ವೃತ್ತ ಕಚೇರಿಯ ಅಧಿಕಾರಿಗಳು, ಖಜಾನೆ ಮತ್ತು ಫೋರೆಕ್ಸ್ ವಿಭಾಗದ ಅಧಿಕಾರಿಗಳು, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗದ ಅಧಿಕಾರಿಗಳು, ನಿಯಮದ ವ್ಯಾಪಕ ಉಲ್ಲಂಘನೆಯಾಗಿದ್ದರೂ ಅದನ್ನು ಕಡೆಗಣಿಸಿದ ಆಡಿಟರ್ಗಳು ಸೇರಿದಂತೆ 54 ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ ಇಷ್ಟೊಂದು ಬೃಹತ್ ಪ್ರಮಾಣದ ಅನರ್ಥ ಸಂಭವಿಸಲು ಅಧಿಕಾರಿಗಳ ನಿಯಮಮೀರಿದ ನಡವಳಿಕೆ ಹಾಗೂ ಕರ್ತವ್ಯಲೋಪ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪಿಎನ್ಬಿಯಲ್ಲಿ 1.14 ಲಕ್ಷ ಕೋಟಿ ವೌಲ್ಯದ 1804 ‘ಬಿಲ್ ಆಫ್ ಎಂಟ್ರಿ (ಬಿಒಇ)’ ಪ್ರಕರಣಗಳು ಇತ್ಯರ್ಥವಾಗಲು ಬಾಕಿ ಇದ್ದು ಇದರಲ್ಲಿ ನೀರವ್ ಮೋದಿ ಮಾಲಕತ್ವದ ಫೈರ್ಸ್ಟಾರ್ ಗ್ರೂಪ್ ಮತ್ತು ಮೆಹುಲ್ ಚೋಕ್ಸಿಯ ಗೀತಾಂಜಲಿ ಗ್ರೂಪ್ ಸಂಸ್ಥೆಯ 99,031 ಕೋಟಿ ಬಿಒಇ ಬಾಕಿ ಉಳಿದಿದೆ. 2010ರಿಂದ 2017ರ ಅವಧಿಯಲ್ಲಿ ಬ್ಯಾಂಕಿನ ವೃತ್ತ ಕಚೇರಿಯ ಹಲವು ಹಿರಿಯ ಅಧಿಕಾರಿಗಳು ಶಾಖಾ ಕಚೇರಿಗೆ ಭೇಟಿ ನೀಡಿದ್ದರೂ ಯಾವುದೇ ಅಧಿಕಾರಿ ಡಿಎಂಎಸ್(ಡೈಲಿ ಮಾನಿಟರಿಂಗ್ ಸಿಸ್ಟಮ್) ವರದಿಯ ಕುರಿತು ಅಥವಾ ಅನಧಿಕೃತ ವ್ಯವಹಾರದ ಬಗ್ಗೆ ಉಲ್ಲೇಖಿಸಿಲ್ಲ ಎಂದು ವರದಿ ತಿಳಿಸಿದೆ.
ಇದೇ ರೀತಿ ಆಡಿಟ್ (ಲೆಕ್ಕಪತ್ರ ಪರಿಶೋಧನೆ) ವರದಿಯಲ್ಲೂ ಯಾವುದೇ ಅವ್ಯವಹಾರದ ಬಗ್ಗೆ ತಿಳಿಸಲಾಗಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಪಿಎನ್ಬಿಯ 10 ಶಾಖಾ ಮುಖ್ಯಸ್ಥರು, 7 ವೃತ್ತ ಕಚೇರಿ ಮುಖ್ಯಸ್ಥರು, 5 ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು, 5 ಆಡಿಟರ್ಗಳು, ಫಾರೆಕ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರು, ಏಕಗವಾಕ್ಷಿ ವಿಭಾಗದ ನಿರ್ವಾಹಕರು ಸೇರಿದಂತೆ ಒಟ್ಟು 54 ಅಧಿಕಾರಿಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದೆ.
ಇವರಲ್ಲಿ ಗೋಕುಲ್ನಾಥ್ ಶೆಟ್ಟಿ, ಬೆಚು ತಿವಾರಿ, ಮನೋಜ್ ಖಾರಟ್ ಮತ್ತು ಯಶವಂತ್ ಜೋಷಿ ಸೇರಿದಂತೆ ಎಂಟು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ. ಈ ಮಧ್ಯೆ ಮಾಧ್ಯಮದ ಜೊತೆ ಮಾತನಾಡಿದ ಮೆಹುಲ್ ಚೋಕ್ಸಿಯ ವಕೀಲರು, ಪಿಎನ್ಬಿಯ ಆಂತರಿಕ ವರದಿ ವಾಸ್ತವವಾಗಿ ಚೋಕ್ಸಿಗೆ ಕ್ಲೀನ್ ಚಿಟ್ ನೀಡಿದಂತಾಗಿದೆ. ಬ್ಯಾಂಕ್ನಲ್ಲೇ ಅವ್ಯವಸ್ಥೆ ಇದೆ ಎಂದು ವರದಿ ತಿಳಿಸಿದೆ. ಇದರರ್ಥ, ವಂಚನೆ ನಡೆದೇ ಇಲ್ಲ ಎಂದಿದ್ದಾರೆ.