ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ: ವಂಝಾರಾ ಬಿಡುಗಡೆ ಮನವಿ ವಿಚಾರಣೆ ಪೂರ್ಣ
ಅಹ್ಮದಾಬಾದ್, ಜೂ. 30: ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ. ವಂಝಾರಾ ಸಲ್ಲಿಸಿದ ಬಿಡುಗಡೆ ಅರ್ಜಿ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಲಯ ಪೂರ್ಣಗೊಳಿಸಿದೆ ಹಾಗೂ ತೀರ್ಪನ್ನು ಜುಲೈ 17ಕ್ಕೆ ಕಾದಿರಿಸಿದೆ. ಗುಜರಾತ್ ಪೊಲೀಸ್ ಹಾಗೂ ಬೇಹುಗಾರಿಕೆ ಸಂಸ್ಥೆಯ ಜಂಟಿ ತಂಡ ನಡೆಸಿದ ಎನ್ಕೌಂಟರ್ಗೆ ಸಂಚು ರೂಪಿಸಿದ ಆರೋಪದಲ್ಲಿ ಬಂಧಿಯಾಗಿದ್ದ ವಂಝಾರಾ ಜಾಮೀನಿನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸಹ ಆರೋಪಿ ಎನ್.ಕೆ. ಅಮೀನ್ ಅವರ ಬಿಡುಗಡೆ ಮನವಿಯ ತೀರ್ಪನ್ನು ಕೂಡ ನ್ಯಾಯಾಲಯ ಅದೇ ದಿನ ಘೋಷಿಸುವ ಸಾಧ್ಯತೆ ಇದೆ. ಸಿಬಿಐ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸರಕಾರಿ ವಕೀಲ ಆರ್.ಸಿ. ಕೊಡೇಕರ್, ‘‘ಒಂದು ವೇಳೆ ಸಾಕಷ್ಟು ಭೌತಿಕ ಸಾಕ್ಷಗಳು ಪತ್ತೆಯಾಗದೇ ಇದ್ದರೆ, ತನಿಖಾಧಿಕಾರಿ ಆರೋಪಿಯ ವಿರುದ್ಧ ಆರೋಪ ಪಟ್ಟಿ ಹೊಂದಿಲ್ಲ ಎಂದು ಹೇಳಬೇಕಾಗುತ್ತದೆ’’ ಎಂದು ಹೇಳಿರುವ ವಂಝಾರಾ ಅವರ ಮನವಿಯನ್ನು ವಿರೋಧಿಸಿದ್ದಾರೆ. ಆರೋಪಿ ಅಪರಾಧ ಎಸಗಿದ್ದಾನೆ ಎಂಬುದನ್ನು ದೃಢಪಡಿಸುವ ಹಲವು ಸಾಕ್ಷಿಗಳ ಹೇಳಿಕೆಯನ್ನು ಕೊಡೇಕರ್ ಉಲ್ಲೇಖಿಸಿದರು.