ಪತ್ತೆಯಾದ ನೋಟ್ಸ್ ನಲ್ಲಿ ಇದ್ದ ಆಘಾತಕಾರಿ ಅಂಶಗಳಿವು
ಒಂದೇ ಕುಟುಂಬದ 11 ಮಂದಿಯ ನಿಗೂಢ ಸಾವು ಪ್ರಕರಣ
ಹೊಸದಿಲ್ಲಿ, ಜು. 2: ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮನೆಯಲ್ಲಿ ಸಿಕ್ಕಿರುವ ಕೈಬರಹದ ನೋಟ್ಸ್ ಕುಟುಂಬ ಆಧ್ಯಾತ್ಮಿಕ ಅಥವಾ ಅತೀಂದ್ರಿಯ ಆಚರಣೆ ಅನುಸರಿಸುತ್ತಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರು ಪವಾಡ ಸದೃಶ್ಯವಾಗಿ ಕಾಣಿಸಿಕೊಳ್ಳುತ್ತಾರೆ ಹಾಗೂ ನೇಣಿಗೆ ಶರಣಾಗುತ್ತಿರುವ ನಮ್ಮನ್ನು ರಕ್ಷಿಸುತ್ತಾರೆ ಎಂದು ಕುಟುಂಬದ ಸದಸ್ಯರು ನಂಬಿದ್ದರು ಎಂದು ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ. ನೋಟ್ಸ್ನಲ್ಲಿ ಬರೆಯಲಾದ ಪ್ರತಿ ಹೆಜ್ಜೆಯನ್ನು ಕುಟುಂಬ ಧಾರ್ಮಿಕವಾಗಿ ಅನುಸರಿಸುತ್ತಿತ್ತು ಎಂದು ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ನೇಣು ಹಾಕಿಕೊಂಡು ಉಸಿರಾಟ ಕಷ್ಟವಾದಾಗ ದೇವರು ಬಂದು ನಮ್ಮನ್ನು ರಕ್ಷಿಸುತ್ತಾರೆ ಎಂದು ಕುಟುಂಬದ ಸದಸ್ಯರು ನಂಬಿರಬೇಕು ಎಂದು ನೋಟ್ಸ್ನ ಭಾವಾರ್ಥದ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆ. ಧಾರ್ಮಿಕ ವಿಚಾರಗಳನ್ನು ಕುಟುಂಬಕ್ಕೆ ತೀವ್ರವಾಗಿ ಅನುಸರಿಸುತ್ತಿತ್ತು. ಕುಟುಂಬದ ಪ್ರತಿ ಸದಸ್ಯರು ದಿನಕ್ಕೆ ಮೂರು ಬಾರಿ ಪ್ರಾರ್ಥಿಸುತ್ತಿದ್ದರು ಎಂದು ಕುಟುಂಬದ ನಿಕಟ ಗೆಳೆಯ ಪ್ರವೀಣ್ ಮಿತ್ತಲ್ ತಿಳಿಸಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಲಲಿತ್ ಭಾಟಿಯಾ (45) ಅವರಿಗೆ ಅಪಘಾತವಾಗಿತ್ತು. ಪ್ಲೈವುಡ್ ಉದ್ಯಮ ನಡೆಸುತ್ತಿರುವ ಲಲಿತ್ ಭಾಟಿಯಾ ಅವರ ಮೇಲೆ ಪ್ಲೈವುಡ್ನ ಬೋರ್ಡ್ ಬಿದ್ದು ಗಂಭೀರ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಅವರು ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಭಾಟೀಯ ಅವರ ಸಾಕಷ್ಟು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪ್ರಾರ್ಥನೆ ಮಾಡಲು ಆರಂಭಿಸಿದರು. ಅನಂತರ ಅವರಿಗೆ ಮಾತು ಬಂದಿತ್ತು. ಬಳಿಕ ಕುಟುಂಬದ ಸದಸ್ಯರು ತೀವ್ರ ಆಧ್ಯಾತ್ಮಿಕರಾದರು ಎಂದು ಈ ಕುಟುಂಬದ ಗೆಳೆಯ ಹೇಮಂತ್ ತಿಳಿಸಿದ್ದಾರೆ.
ಹತ್ಯೆ ಅಲ್ಲ, ಆತ್ಮಹತ್ಯೆ
ಶವವಾಗಿ ಪತ್ತೆಯಾದ 11 ಮಂದಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾವನ್ನಪ್ಪುವ ಸಂದರ್ಭ ಒದ್ದಾಟ ನಡೆಸಿದ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎಂದು ಮರಣೋತ್ತರ ವರದಿ ಹೇಳಿದೆ.
11 ಮಂದಿಯ ಕಣ್ಣು ದಾನ
ಆತ್ಮಹತ್ಯೆ ಮಾಡಿಕೊಂಡ 11 ಮಂದಿ ಸದಸ್ಯರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಭಾಟಿಯಾ ಕುಟುಂಬದ ಸಂಬಂಧಿ ನವನೀತ್ ಬಾತ್ರಾ ತಿಳಿಸಿದ್ದಾರೆ. ಮೊದಲನೇ ವಿಚಾರ ಎಂದರೆ, ನೇತ್ರ ದಾನ ಮಾಡಿದರೆ 22 ಮಂದಿಗೆ ದೃಷ್ಟಿ ಒದಗಿಸಲು ಸಾಧ್ಯ. ಕುಟುಂಬದ ಧಾರ್ಮಿಕ ಶ್ರದ್ಧೆ ಹಾಗೂ ಇತರರಿಗೆ ನೆರವು ನೀಡುವ ನಿಲುವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಅನುಮತಿ ಪತ್ರವನ್ನು ರವಿವಾರ ನೀಡಿದ್ದೇವೆ ಎಂದು ಬಾತ್ರಾ ಹೇಳಿದ್ದಾರೆ.