ಯಾವುದೇ ವಿಷಯಕ್ಕೂ ನಿಮ್ಮ ಸಮ್ಮತಿಯ ಅಗತ್ಯವಿಲ್ಲ: ಲೆ.ಗವರ್ನರ್ಗೆ ಕೇಜ್ರಿವಾಲ್ ಪತ್ರ
ಹೊಸದಿಲ್ಲಿ, ಜು.5: ಚುನಾಯಿತ ಸರಕಾರವೇ ವಾಸ್ತವಿಕ ಅಧಿಕಾರ ಹೊಂದಿರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ದಿಲ್ಲಿಯ ಲೆ.ಗವರ್ನರ್ ಅನಿಲ್ ಬೈಜಾಲ್ಗೆ ಪತ್ರ ಬರೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇನ್ನು ಮುಂದೆ ಯಾವುದೇ ವಿಷಯಕ್ಕೂ ನಿಮ್ಮ ಸಮ್ಮತಿಯ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಗೌರವಾನ್ವಿತ ಸುಪ್ರೀಂಕೋರ್ಟ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಎರಡು ನಿರ್ದಿಷ್ಟ ವಿಷಯಗಳಾದ - ಸೇವಾ ಇಲಾಖೆಗೆ ಸಂಬಂಧಿಸಿದ ಕಾರ್ಯ ನಿರ್ವಹಣಾಧಿಕಾರ ಸಚಿವರ ಸಮಿತಿಗೆ ಇರುತ್ತದೆ ಮತ್ತು ಇನ್ನು ಮುಂದೆ ಯಾವುದೇ ವಿಷಯಕ್ಕೂ ಲೆ.ಗವರ್ನರ್ ಸಮ್ಮತಿಯ ಅಗತ್ಯವಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಪತ್ರದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.
ಸರಕಾರ ಕಳುಹಿಸಿರುವ ಆದೇಶವನ್ನು ಅಧಿಕಾರಿಗಳು ಗೌರವಿಸದೆ ವಾಪಾಸು ಕಳಿಸಿದ ಬಳಿಕ ಕೇಜ್ರೀವಾಲ್ ಈ ಪತ್ರವನ್ನು ಬರೆದಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ದಿಲ್ಲಿ ಸರಕಾರ, ಕೇಂದ್ರ ಸರಕಾರ, ಲೆಪ್ಟಿನೆಂಟ್ ಗವರ್ನರ್ ಇವರ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಸುಪ್ರೀಂಕೋರ್ಟ್ನ ಆದೇಶವನ್ನು ಅನುಷ್ಠಾನಕ್ಕೆ ತರಲು ಸಹಕರಿಸಿ ದಿಲ್ಲಿಯ ಅಭಿವೃದ್ಧಿಗಾಗಿ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕೋರಲು ಲೆ.ಗವರ್ನರ್ರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದೇನೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.