ಎಸ್ಸಿ/ಎಸ್ಟಿ ಕಾಯ್ದೆ ಕುರಿತು ತೀರ್ಪು ಬರೆಯುವಾಗ ತುರ್ತು ಸ್ಥಿತಿ ತಲೆಯಲ್ಲಿತ್ತು
ನಿವೃತ್ತ ಸುಪ್ರೀಂ ನ್ಯಾಯಾಧೀಶ ಗೋಖಲೆ
ಹೊಸದಿಲ್ಲಿ,ಜು.7: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ತಡೆ)ಕಾಯ್ದೆ ವಿಚಾರಣೆಗೆ ಸಂಬಂಧಿಸಿದಂತೆ ವ್ಯಕ್ತಿಯ ಸ್ವಾತಂತ್ರ್ಯದ ವಿಷಯ ಗರಿಗೆದರಿದ್ದಾಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನಿಸಲು ತುರ್ತುಸ್ಥಿತಿ ಸಂದರ್ಭದಲ್ಲಿ ನಡೆದಿದ್ದ ತಪ್ಪುಗಳು ತನ್ನ ತಲೆಯಲ್ಲಿದ್ದವು ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾಗಿರುವ ನ್ಯಾ.ಆದರ್ಶ ಕುಮಾರ ಗೋಯೆಲ್ ಅವರು ಶನಿವಾರ ಇಲ್ಲಿ ಹೇಳಿದರು.
ತನ್ನ ಮಾ.20ರ ಆದೇಶವನ್ನು ಸಮರ್ಥಿಸಿಕೊಂಡ ಅವರು,ನ್ಯಾಯಾಲಯಗಳು ಅಮಾಯಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅವುಗಳನ್ನು ಮುಚ್ಚುವುದೇ ಒಳ್ಳೆಯದು ಎಂದು ನುಡಿದರು. ಎಸ್ಸಿ/ಎಸ್ಟಿ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸುವಾಗ ಕೆಲವು ಮಾರ್ಗಸೂಚಿಗಳನ್ನು ಅವರು ತನ್ನ ಮಾ.20ರ ಆದೇಶದಲ್ಲಿ ವಿಧಿಸಿದ್ದರು.
ತೀರ್ಪಿನಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯ ವ್ಯಾಪಕ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಗೋಯೆಲ್,ಕಾಯ್ದೆಯಡಿ ಯಾರನ್ನೇ ಆದರೂ ತಕ್ಷಣ ಬಂಧಿಸುವಂತಿಲ್ಲ ಮತ್ತು ಯಾವುದೇ ಕ್ರಮವನ್ನು ಕೈಗೊಳ್ಳುವ ಮುನ್ನ ಪೊಲೀಸರು ಪ್ರಾಥಮಿಕ ತನಿಖೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಆದೇಶಿಸುವ ಮೂಲಕ ಸುದ್ದಿಯಾಗಿದ್ದರು.
ತುರ್ತು ಸ್ಥಿತಿಯ ಹೇರಿಕೆಯ ಬಳಿಕ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು ಮತ್ತು ಇದು ಪೊಲೀಸರು ಹಾಗೂ ಆಡಳಿತಗಾರರ ಹೆಚ್ಚಿನ ನಿರಂಕುಶಾಧಿಕಾರಕ್ಕೆ ಕಾರಣವಾಗಿತ್ತು. ಆದರೆ ಅಂತಹ ವಾತಾವರಣದಲ್ಲಿಯೂ ನ್ಯಾಯಾಲಯಗಳು ನ್ಯಾಯವನ್ನು ಎತ್ತಿಹಿಡಿದಿದ್ದವು. ತುರ್ತುಸ್ಥಿತಿಯಿಂದಾಗಿ ಒಬ್ಬ ಅಮಾಯಕ ವ್ಯಕ್ತಿಯನ್ನು ಬಂಧಿಸಲಾಗಿದೆ ಅಥವಾ ಆತನ ವಿರುದ್ಧ ಇಂತಿಂಥ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ರುಜುವಾತು ಮಾಡಿದರೆ ನ್ಯಾಯಾಲಯವು ಆತನಿಗೆ ತಕ್ಷಣ ಜಾಮೀನು ಮಂಜೂರು ಮಾಡುತ್ತಿತ್ತು. ಇದು ತನ್ನ ಅನುಭವ ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘವು ತನಗಾಗಿ ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ನ್ಯಾ.ಗೋಖಲೆ ತಿಳಿಸಿದರು.
ತೀರ್ಪು ಬರೆಯುವಾಗ ಇವೆಲ್ಲ ವಿಷಯಗಳು ತನ್ನ ಮನಸ್ಸಿನಲ್ಲಿದ್ದವು ಎಂದ ಅವರು,ಯಾವುದೇ ಅಮಾಯಕ ವ್ಯಕ್ತಿಯನ್ನು ಬಂಧಿಸಬಹುದೇ? ಅಮಾಯಕನೋರ್ವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದ್ದರೆ ನ್ಯಾಯಾಲಯಗಳಿರುವುದೇಕೆ ಎನ್ನುವ ವಿಚಾರ ತೀರ್ಪನ್ನು ಬರೆಯುವಾಗ ತನ್ನ ತಲೆಯಲ್ಲಿತ್ತು. ಮೂಲಭೂತ ಹಕ್ಕುಗಳನ್ನು ರಕ್ಷಿಸಲಾಗದಿದ್ದರೆ ನ್ಯಾಯಾಲಯಗಳನ್ನು ಮುಚ್ಚುವುದು ಒಳ್ಳೆಯದು ಎಂದು ಹೇಳಿದರು.
1953,ಜು.7ರಂದು ಹರ್ಯಾಣದ ಹಿಸ್ಸಾರ್ನಲ್ಲಿ ಜನಿಸಿದ್ದ ಗೋಖಲೆ ಅವರು ಸುಮಾರು 27 ವರ್ಷಗಳ ವಕೀಲಿ ಅನುಭವದ ಬಳಿಕ 2001ರಲ್ಲಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಗುವಾಹಟಿ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು 2014ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿದ್ದರು.