ಜೈಲು ಆವರಣದಲ್ಲೇ ಮುನ್ನಾ ಬಜರಂಗಿಯ ಗುಂಡಿಟ್ಟು ಕೊಲೆ
ಲಕ್ನೋ, ಜು.9: ಕುಖ್ಯಾತ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಬಜರಂಗಿಯನ್ನು ಸೋಮವಾರ ಉತ್ತರಪ್ರದೇಶದ ಬಘಪತ್ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಝಾನ್ಸಿ ಜೈಲಿನಲ್ಲಿದ್ದ ಬಜರಂಗಿಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಶನಿವಾರ ಬಘಪತ್ ಜೈಲಿಗೆ ಕರೆ ತರಲಾಗಿತ್ತು.
ಬಜರಂಗಿಯನ್ನು ಸ್ಥಳೀಯ ನ್ಯಾಯಾಲಯವೊಂದಕ್ಕೆ ವಿಚಾರಣೆ ಹಾಜರುಪಡಿಸುವ ಉದ್ದೇಶಕ್ಕಾಗಿ ಪೊಲೀಸ್ ವಾಹನದಲ್ಲಿರಿಸಲಾಗಿತ್ತು. ಈ ವೇಳೆ ಜೈಲಿನ ಸಹ ಕೈದಿ ಹಾಗೂ ಇನ್ನೊಂದು ಗ್ಯಾಂಗ್ ನ ಸುನೀಲ್ ರಥಿ ಎಂಬಾತನು ಬಜರಂಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಬಜರಂಗಿ ಪತ್ನಿ ಸೀಮಾ ಸಿಂಗ್ ಅವರು "ಉತ್ತರಪ್ರದೇಶದ ಪೊಲೀಸರು ಜೈಲಿನಲ್ಲಿಯೇ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬು ಆರೋಪ ಮಾಡಿದ್ದರು. ಈ ವಿಚಾರವನ್ನು ನ್ಯಾಯಾಲಯ ಹಾಗೂ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದರು.
Next Story